ರಾಜ್ಯ

ದ್ವಿತೀಯ ಪಿಯುಸಿಯಲ್ಲಿ ಫೇಲ್: ತುಮಕೂರಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ!

Raghavendra Adiga

ತುಮಕೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ವರದಿಯಾಗಿದೆ. ಇದು ಕಳೆದ ಎರಡು ದಿನಗಳಲ್ಲಿ ಕರ್ನಾಟಕದಲ್ಲಿವಿದ್ಯಾರ್ಥಿ ಆತ್ಮಹತ್ಯೆಯ ಎರಡನೇ ಘಟನೆಯಾಗಿದೆ.

ಪಿಯುಸಿ ವಿದ್ಯಾರ್ಥಿ ಮಂಗಳವಾರ ಬಸವಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತನನ್ನು ವಿಜಯ ಪಿಯು ಕಾಲೇಜಿನ ವಿದ್ಯಾರ್ಥಿ ಚೇತನ್ ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿಯು ಜೀವಶಾಸ್ತ್ರ (30) ಮತ್ತು ರಸಾಯನಶಾಸ್ತ್ರ (29) ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ ಆದರೆ ಒಟ್ಟಾರೆ ಶೇ 89 ರಷ್ಟು ಅಂಕ ಗಳಿಸಿದ್ದ. 

 ಸ್ನಾನ ಮಾಡುವ ನೆಪದಲ್ಲಿ ವಿದ್ಯಾರ್ಥಿ ಬಾತ್ ರೂಮ್ ಗೆ ತೆರಳಿ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದು ಗಂಟೆ ಕಳೆದರೂ ಮಗ ಬಾರದೆ ಹೋದಾಗ ತಾಯಿ ಆತನ ತಂದೆಯನ್ನು ಕರೆದಿದ್ದಾಳೆ.ತಂದೆ ಬಾಗಿಲು ಒಡೆದು ನೋಡಲಾಗಿ ಮಗ ಆತ್ಮಹತ್ಯೆಗೆ ಶರಣಾಗಿದ್ದು ತಿಳಿದಿದೆ. ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಅಲ್ಲಿನ ವೈದ್ಯರು ಆತ ಸತ್ತಿರುವುದಾಗಿ ಘೋಷಿಸಿದ್ದಾರೆ. 

ಘಟನೆ ಸಂಬಂಧ ಕ್ಯಾತಸಂದ್ರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

SCROLL FOR NEXT