ರಾಜ್ಯ

ಕೋವಿಡ್-19 ರೋಗಿಗಳನ್ನು ಕೀಳಾಗಿ ಕಾಣುವವರು, ಅವಮಾನಿಸುವವರಿಗೆ ಶಿಕ್ಷೆ ನೀಡಿ: ವಿರೋಧ ಪಕ್ಷಗಳ ಆಗ್ರಹ

Sumana Upadhyaya

ಬೆಂಗಳೂರು: ಕೋವಿಡ್-19 ರೋಗಿಗಳ ವಿರುದ್ಧ ನಾಗರಿಕರು ತೋರುತ್ತಿರುವ ಅಮಾನವೀಯ ವರ್ತನೆ, ಕಾನೂನು ಬಾಹಿರ ನಡವಳಿಕೆಗೆ ವಿರೋಧ ಪಕ್ಷದ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ. ಪೊಲೀಸರು, ಸರ್ಕಾರ ಮತ್ತು ಅಧಿಕಾರಿಗಳು ಇಂತಹ ಕ್ರಮಗಳು ನಡೆಯದಂತೆ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕೋರಮಂಗಲದ ನಿವಾಸಿ ರವಿ ಕುಮಾರ್(ಹೆಸರು ಬದಲಿಸಲಾಗಿದೆ) ಕೋವಿಡ್-19 ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದರೆ ಅವರಿಗೆ ಆಘಾತ ಕಾದಿತ್ತು. ಅವರ ಮನೆ ಮಾಲೀಕರು ಮತ್ತು ಅಕ್ಕಪಕ್ಕದವರು ಅಸ್ಪ್ಱಶ್ಯರಂತೆ ಕಂಡರು. ಮನೆಗೆ ಬರಬೇಡಿ ಎಂದು ಮನೆ ಮಾಲೀಕರು ಹೇಳಿದರಂತೆ. ಅವರ ಪತ್ನಿ ಮತ್ತು ಮಕ್ಕಳನ್ನು ಸಹ ಬೇರೆಯವರ ಜೊತೆ ಬೆರೆಯಲು ಬಿಡುತ್ತಿಲ್ಲವಂತೆ. ಈ ನಡತೆ ಮಿತಿ ಮೀರಿದಾಗ ರವಿ ಕುಮಾರ್ ಮನೆಯನ್ನು ಖಾಲಿ ಮಾಡುವ ಯೋಚನೆಗೆ ಮುಂದಾದರಂತೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಸಂಪರ್ಕಿಸಿದಾಗ ರವಿ ಕುಮಾರ್ ತಮ್ಮ ಅಸಹಾಯಕತೆ ತೋಡಿಕೊಂಡರು.

ಮತ್ತೊಂದು ಪ್ರಕರಣದಲ್ಲಿ ಮಾಜಿ ಪತ್ರಕರ್ತ ನೈರುತ್ಯ ಬೆಂಗಳೂರಿನ ನಿವಾಸಿ ಕೋವಿಡ್-19ಗೆ ಮೃತಪಟ್ಟಿದ್ದರು. ಅವರ ಕುಟುಂಬದವರು ರಸ್ತೆಯಲ್ಲಿ ಹೋಗುತ್ತಿದ್ದರೆ ನೆರೆಹೊರೆಯವರು ಬ್ಲೀಚಿಂಗ್ ಪೌಡರನ್ನು ಅವರ ಮೇಲೆ ಸಿಂಪಡಿಸುತ್ತಿದ್ದರಂತೆ. ಇಂತಹ ಅಮಾನವೀಯ ನಡತೆ ಬಗ್ಗೆ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೂಡ ಪ್ರಸ್ತಾಪಿಸಿದ್ದರು.

ಯಾರು ಕೂಡ ಅನಾರೋಗ್ಯಕ್ಕೀಡಾಗಬೇಕೆಂದು ಬಯಸುವುದಿಲ್ಲ. ಹೀಗಾಗಿ ಕೋವಿಡ್-19 ರೋಗಿಗಳನ್ನು ವಿಶೇಷ ಕಾಳಜಿ ವಹಿಸಿಕೊಂಡು ನೋಡಿ ಅವರ ಮೇಲೆ ದಯೆ, ಕರುಣೆ ತೋರಿಸಬೇಕು. ಸರ್ವಜ್ಞ ಹೇಳಿದ್ದು ಇಲ್ಲಿ ನನಗೆ ನೆನಪಾಗುತ್ತದೆ, ನಿಮ್ಮ ಮನೆಯವರಂತೆ ನಿಮ್ಮ ನೆರೆಹೊರೆಯವರನ್ನು ನೋಡಿದರೆ ಕೈಲಾಸ ಪರ್ವತಕ್ಕೆ ತಲುಪಿದಷ್ಟು ಸಂತೋಷ, ಸಂಭ್ರಮ ನಿಮಗಾಗಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳುತ್ತಾರೆ.

ಇಂತಹ ಕ್ರಮದ ವಿರುದ್ಧ ಪೊಲೀಸರು, ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಅಮಾನವೀಯ ಕೃತ್ಯಗಳು, ನಡತೆ ವಿರುದ್ಧ ಕಾನೂನು ಕ್ರಮ ತರಬೇಕು ಎನ್ನುತ್ತಾರೆ ಖಂಡ್ರೆ.

ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಪತ್ರಿಕೆ ಜೊತೆ ಮಾತನಾಡಿ, ಕೋವಿಡ್-19 ರೋಗಿಗಳು ಮತ್ತು ಅವರ ಮನೆಯವರನ್ನು ಅವಮಾನವೀಯವಾಗಿ ಕಾಣುವ ಅನಾಗರಿಕ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

SCROLL FOR NEXT