ಬೆಂಗಳೂರು: ಸಿಎಎ ಮತ್ತು ಎನ್ ಆರ್ ಸಿ ಕಾಯ್ದೆ ಬೆಂಬಲಿಸಿ ಟೌನ್ ಹಾಲ್ ಮುಂದೆ ಕೈಗೊಂಡಿದ್ದ ರ್ಯಾಲಿಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಮೊಹಮದ್ ಇರ್ಫಾನ್, ಅಕ್ಬರ್ ಫಾಶಾ, ಸೈ್ಯದ್ ಸಿದ್ದಿಖಿ, ಮತ್ತು ಸನಾವುಲ್ಲಾ ಶರೀಫ್ ಅವರಿಗೆ ಜಾಮೀನು ನೀಡಿ ನ್ಯಾಯಮೂರ್ತಿ ಜಾನ್ ಮೈಕೆಲ್ ಚುನಾ ಆದೇಶ ಹೊರಡಿಸಿದ್ದಾರೆ.
ಕಳೆದ ಜನವರಿ 12 ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ತಲಾ 1 ಲಕ್ಷ ರು ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಪಡೆದು ಜಾಮೀನು ನೀಡಲಾಗಿದೆ. ಅವಶ್ಯಕತೆ ಬಂದಾಗ ನ್ಯಾಯಾಲಯದ ಮುಂದೆ ಹಾಜರಾಗಲು ಆದೇಶ ನೀಡಿದೆ. ಜೊತೆಗೆ ಅನುಮತಿ ಪಡೆಯದೇ ಹೊರ ದೇಶಗಳಿಗೆ ಸಂಚರಿಸಿದಂತೆ ಸೂಚಿಸಿದೆ, ರಾಜಕೀಯ ಒತ್ತಡದಿಂದಾಗಿ ಅವರ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ, ಹೀಗಾಗಿ ಜಾಮೀನು ಅರ್ಜಿ ಪರಿಗಣಿಸುವಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿದ್ದರು.