ರಾಜ್ಯ

ಸಾರಿ, ಐಎಲ್ಐ ಪ್ರಕರಣಗಳ ವರದಿ ಸಂಗ್ರಹಿಸುವಲ್ಲಿ ಅಧಿಕಾರಿಗಳು ವಿಫಲ: ಬೆಂಗಳೂರಿನಲ್ಲಿ ಲಾಕ್ಡೌನ್ ನಿಶ್ಫಲ?

Manjula VN

ಬೆಂಗಳೂರು: ಕೊರೋನಾ ವಿರುದ್ಧ ದಿಟ್ಟ ಹೋರಾಟ ಮಾಡಿ ಸೋಂಕು ಹರಡುವುದನ್ನು ತಡೆಯಲು ಕೆಲ ದಿನಗಳ ಹಿಂದಷ್ಟೇ ಸಿಲಿಕಾನ್ ಸಿಟಿಯಲ್ಲಿ ಒಂದು ವಾರದ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಆದರೆ, ಈ ಲಾಕ್ಡೌನ್ ವಿಫಲವಾಯಿತೇ ಎಂಬ ಅನುಮಾನಗಳು ಇದೀಗ ಮೂಡಲು ಆರಂಭಿಸಿವೆ. 

ಇದಕ್ಕೆ ಕಾರಣ ಲಾಕ್ಡೌನ್ ವೇಳೆ ಸಾರಿ ಹಾಗೂ ಐಎಲ್ಐ ಪ್ರಕರಣಗಳ ಪತ್ತೆ ಹಚ್ಚಿ ಕೊರೋನಾ ಸೋಂಕು ಹರಡುವುದನ್ನು ಮಟ್ಟ ಹಾಕಲು ಸರ್ಕಾರ ಮುಂದಾಗಿತ್ತು. ಆದರೆ, ಈ ವೇಳೆ ಈ ಕುರಿತ ವರದಿಗಳನ್ನು ಸಂಗ್ರಹಿಸುೋವಲ್ಲಿ ಅಧಿಕಾರಿಗಳು ವಿಫಲಗೊಂಡಿರುವುದು ಈ ಅನುಮಾನ ಮೂಡುವಂತೆ ಮಾಡಿದೆ. 

ಲಾಕ್ಡೌನ್ ಘೋಷಣೆಗೊಂಡ ಮೊದಲೆರಡು ದಿನ ಅಧಿಕಾರಿಗಳೊಂದಿಗೆ ಸಮಿತಿ ರಚನೆ ಮಾಡಿ ಜುಲೈ.18ವರೆಗೂ ತರಬೇತಿ ನೀಡಲು ನಿರ್ಧರಿಸಲಾಗಿತ್ತು. ನಂತರ ದಿನಗಳು ಅಂದರೆ ಜುಲೈ.19, 20, 21 ರಂದು ಮನೆ ಮನೆಗೆ ತೆರಳಿ ಸಾರಿ ಹಾಗೂ ಐಎಲ್ಐ ಪ್ರಕರಣಗಳನ್ನು ಪತ್ತೆ ಹಚ್ಚಲು ಉದ್ದೇಶಿಸಲಾಗಿತ್ತು. ಆದರೆ, ಈ ಕಾರ್ಯಾಚರಣೆಗಳು ಯಶಸ್ವಿಯಾಗಿ ನಡೆದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. 

ಸಮಿತಿಯಲ್ಲಿ 800 ಮಂದಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಇದರಲ್ಲಿ ಬಹುತೇಕ ಜನರು ಸೇವೆಗೆ ಹಾಜರಾಗಿಲ್ಲ ಎಂದು ಹೇಳಲಾಗುತ್ತಿದೆ. ಯಲಹಂಕದಲ್ಲಿಯೇ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲು 300 ಮಂದಿ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಆದರೆ, ಬಹುತೇಕರು ಕರ್ತವ್ಯಕ್ಕೆ ಹಾಜರಾಗದೆಯೇ ಹಳೆಯ ವರದಿಯನ್ನೇ ನೀಡಿದ್ದಾರೆಂದು ಹೇಳಲಾಗುತ್ತಿದೆ. 

ಯಲಹಂಕ ವಲಯದಲ್ಲಿನ ಪರಿಸ್ಥಿತಿ ಕುರಿತಂತೆ ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದು, ಈ ವೇಳೆ ಅಧಿಕಾರಿಗಳು ಉತ್ತರ ನೀಡಲು ಕಷ್ಟ ಪಡಬೇಕಾಗುತ್ತದೆ ಎಂದು ಸರ್ಕಾರದ ಆಡಳಿತ ಮಂಡಳಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹೇಳಿದ್ದಾರೆ. 

ಬಿಬಿಎಂಪಿ ಆಯುಕ್ತರನ್ನು ಬದಲಿಸಿದ ಬಳಿಕ ಸಾಕಷ್ಟು ನಿರ್ಧಾರಗಳೂ ಕೂಡ ಬದಲಾದವು. ಕಂದಾಯ ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಪ್ರಸಾದ್ ಅವರು ಕಾರ್ಯನಿರ್ವಹಿಸಿದ್ದು, ತಮ್ಮ ಹಿಂದಿನ ಜವಾಬ್ದಾರಿಯನ್ನೂ ಪ್ರಸಾದ್ ಅವರು ನೋಡಿಕೊಳ್ಳಬೇಕಾಗಿದೆ. ಇದರ ನಡುವಲ್ಲೇ ವಿಶೇಷವಾಗಿ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ಅವರು ಪ್ರತ್ಯೇಕವಾಗಿ ನಿರ್ವಹಿಸಬೇಕಾಗಿದೆ.

ಸಮೀಕ್ಷೆ ನಡೆಸುವುದು ಮತ್ತು ವರದಿಯನ್ನು ಪಡೆಯುವಲ್ಲಿ ವಿಳಂಬ ನೀತಿ ಅನುಸರಿಸಿದ್ದೇ ಆದರೆ, ಮುಂದಿನ ದಿನಗಳಲ್ಲಿ ಭಾರೀ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

SCROLL FOR NEXT