ರಾಜ್ಯ

ಕೊರೋನಾ ಸಾಂಕ್ರಾಮಿಕ ನಡುವೆಯೇ ಕರ್ನಾಟಕಕ್ಕೆ ಪ್ರವಾಹದ ತಲೆನೋವು!

Manjula VN

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ನಡುವೆಯೇ ಕರ್ನಾಟಕಕ್ಕೆ ಹೊಸದೊಂದು ತಲೆನೋಪು ಆರಂಭವಾಗಿದ್ದು, ಭಾರಿ ಮಳೆಯಿಂದಾಗದಿ ರಾಜ್ಯದಲ್ಲಿ ಇದೀಗ ಪ್ರವಾಹದ ಭೀತಿ ಆರಂಭವಾಗಿದೆ.

ಮುಂದಿನ ಕೆಲವೇ ವಾರಗಳಲ್ಲಿ ರಾಜ್ಯದಲ್ಲಿ ಭಾರಿ ಪ್ರಮಾಣದ ಪ್ರವಾಹ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷ ಗಡಿಯತ್ತ ದಾಪುಗಾಲಿರಿಸಿದೆ. ಇದರ ನಡುವೆಯೇ ರಾಜ್ಯಕ್ಕೆ ಪ್ರವಾಹ ಭೀತಿ ಆವರಿಸಿದ್ದು, ರಾಜ್ಯದ ಸುಮಾರು 1,980 ಗ್ರಾಮಗಳು ಪ್ರವಾಹದಲ್ಲಿ ಮುಳುಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾಹಿತಿ ನೀಡಿರುವ ಕಂದಾಯ ಸಚಿವ ಆರ್‌.ಅಶೋಕ್ ಅವರು, 'ರಾಜ್ಯದಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಬಹುದೆಂಬ ಕಾರಣಕ್ಕೆ 19 ಜಿಲ್ಲೆಗಳ 1,980 ಗ್ರಾಮಗಳ ಸುಮಾರು 52 ಲಕ್ಷ ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಚಿಂತನೆ ನಡೆದಿದೆ’ ಎಂದು ಹೇಳಿದ್ದಾರೆ.

ಶನಿವಾರ ನಡೆದ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ‘ಕೇರಳ ಮತ್ತು  ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಈ ರಾಜ್ಯಗಳಿಂದ ರಾಜ್ಯಕ್ಕೆ ನೀರು ಬಂದರೆ ಸಮಸ್ಯೆಯಾಗಲಿದೆ. ಹೀಗಾಗಿ, ನಮ್ಮ ಜಿಲ್ಲಾಧಿಕಾರಿಗಳು ವಾಟ್ಸಪ್‌ ಗ್ರೂಪ್‌ ಮಾಡಿಕೊಂಡು, ಆ ರಾಜ್ಯಗಳ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಿದ್ದೇನೆ’ ಎಂದರು.

‘ನೀರು ಬಿಡುವ ಬಗ್ಗೆ ಒಂದು ವಾರ ಮೊದಲೇ ಅಕ್ಕ-ಪಕ್ಕದ ರಾಜ್ಯಗಳು ಮಾಹಿತಿ ನೀಡಬೇಕು. ಅದಕ್ಕಾಗಿ ಸಮನ್ವಯ ಸಮಿತಿ ರಚಿಸಿದ್ದೇವೆ. ಕೊಯ್ನಾ ಜಲಾಶಯದಿಂದ ಈಗಾಗಲೇ 17 ಸಾವಿರ ಕ್ಯುಸೆಕ್‌ ನೀರು ಬರುತ್ತಿದೆ. ಪ್ರವಾಹದಿಂದ ಉಂಟಾಗಬಹುದಾದ ಸಮಸ್ಯೆ ಪರಿಹರಿಸಲು 1,980 ಗ್ರಾಮಗಳಿಗೂ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಂತ್ರಸ್ತರಿಗೆ ನೆಲೆ ಕಲ್ಪಿಸಲು 1,740 ಸಾಂತ್ವನ ಕೇಂದ್ರಗಳನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ  1,144 ಕೋಟಿ ರೂ ಇದೆ. ವಾರದೊಳಗೆ ಇಲಾಖಾ ಸಮನ್ವಯ ಕಾರ್ಯಪಡೆ ರಚಿಸಲಾಗುವುದು ಎಂದು ಹೇಳಿದರು.

ಅಂತೆಯೇ ‘ಎನ್‌ಡಿಆರ್‌ಎಫ್‌ ಕಾರ್ಯಪಡೆ ಕೂಡ 15 ದಿನಗಳಿಗೊಮ್ಮೆ ಸಭೆ ನಡೆಸಬೇಕು. ಅಗ್ನಿಶಾಮಕ ಸಿಬ್ಬಂದಿಗೂ ಅಣಕು ಪ್ರದರ್ಶನ ನಡೆಸಲು ಸೂಚಿಸಿದ್ದೇನೆ. ಭೂಕುಸಿತ ಉಂಟಾಗುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗುವುದು. ಕಳೆದ ವರ್ಷ ಕೊಡಗಿನಲ್ಲಿ ಭೂಕುಸಿತದಿಂದ ಹೆಚ್ಚು ಜನ ಮೃತಪಟ್ಟಿದ್ದರು. ಹೀಗಾಗಿ, ಕುಸಿತ ಉಂಟಾಗುವ ಸಾಧ್ಯತೆಯ ಬಗ್ಗೆ ಸಮೀಕ್ಷೆ ನಡೆಸಲಾಗಿದೆ’ ಎಂದು ಅಶೋಕ್ ಹೇಳಿದರು.

SCROLL FOR NEXT