ಮಂಗಳೂರು: ಕೊರೋನಾ ಸೋಂಕಿನ ಮಧ್ಯೆ ಹಠಾತ್ ಬೆಳವಣಿಗೆಯೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ ಅವರ ಸ್ಥಾನಕ್ಕೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ರಾಜೇಂದ್ರ ಕೆ ವಿ ಅವರನ್ನು ನೇಮಿಸಿದೆ.
ಸಿಂಧು ಅವರನ್ನು ಬೆಂಗಳೂರಿನ ವಿದ್ಯುನ್ಮಾನ ನಾಗರಿಕ ಸೇವೆ ಪೂರೈಕೆ ಮತ್ತು ಡಿಪಿ ಅಂಡ್ ಆರ್ (ಇ-ಆಡಳಿತ) ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಇನ್ನೂ ಒಂದು ವರ್ಷ ಸೇವೆ ಪೂರೈಸದಿರುವಾಗಲೇ ವರ್ಗಾವಣೆ ಆದೇಶ ಬಂದಿದ್ದು ಸಿಂಧು ಅವರಿಗೆ ಆಘಾತವನ್ನುಂಟುಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅವರು ದ.ಕ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಕಾನೂನನ್ನು ಬೇಕಾಬಿಟ್ಟಿ ತಮ್ಮ ಕೈಗೆತ್ತಿಕೊಳ್ಳುವವರು ಮತ್ತು ಗೋವು ಸೇರಿದಂತೆ ಇತರ ಪ್ರಾಣಿಗಳನ್ನು ಸಾಗಿಸುವವರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಂಧು ಅವರು ಮೊನ್ನೆ ಎಚ್ಚರಿಕೆ ನೀಡಿದ್ದರು. ಇದರ ನಂತರ ಅವರಿಗೆ ಸಾಕಷ್ಟು ಕೊಲೆ ಬೆದರಿಕೆ ಕರೆಗಳು ಬಂದಿದ್ದವು.ಈ ಸಂದರ್ಭದಲ್ಲಿಯೇ ಸರ್ಕಾರದಿಂದ ವರ್ಗಾವಣೆ ಆದೇಶ ಬಂದಿದೆ.