ಚಾಮರಾಜನಗರ: ಹಾವಿನ ವಿಷ ತೆಗೆದು ಹಲವರನ್ನು ಬದುಕಿಸಿದ ಪವಾಡಕ್ಕೆ ಖ್ಯಾತಿಯಾಗಿದ್ದ ನಾಗಪ್ಪ ದೇಗುಲದಲ್ಲೇ ಹಾವು ಕಚ್ಚಿ ಮಗುವೊಂದು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ತೆಳ್ಳನೂರಿನಲ್ಲಿ ನಡೆದಿದೆ.
ತೆಳ್ಳನೂರಿನ ಸಿದ್ದ ಎಂಬವರ ಮಗ ಅಜಯ್(1.5 ವರ್ಷ) ಮೃತ ದುರ್ದೈವಿ. ಗ್ರಾಮದ ನಾಗಪ್ಪ ದೇಗುಲದಲ್ಲಿ ಸಿದ್ದ ಅವರ ತಮ್ಮನ ಮದುವೆ ಇಂದು ನಡೆಯುತ್ತಿತ್ತು. ಮಗು ದೇಗುಲ ಮುಂಭಾಗದ ಧೂಪದ ಕುಳಿಯಲ್ಲಿ ಆಟವಾಡುತ್ತಿದ್ದ ವೇಳೆ ಗೋಧಿನಾಗರಹಾವೊಂದು ಕಚ್ಚಿದೆ.
ಕಚ್ಚಿದ ಸ್ವಲ್ಪ ಹೊತ್ತಿನಲ್ಲೇ ಅಸ್ವಸ್ಥಗೊಂಡ ಮಗುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಸಂಜೆ ವೇಳೆ ಮಗು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬಳಿಕ ಕುಟುಂಬಸ್ಥರು ಧೂಪದ ಕುಳಿಯ ಕಲ್ಲನ್ನು ಸರಿಸಿದ ವೇಳೆ ಹಾವೊಂದು ಕಂಡಿದ್ದು ಮಗುವನ್ನು ಕಳೆದುಕೊಂಡ ಕೋಪದಲ್ಲಿ ಹಾವನ್ನು ಸಾಯಿಸಿ ಸುಟ್ಟು ಹಾಕಿದ್ದಾರೆ.
ಈ ದೇಗುಲಕ್ಕೆ ಹಾವು, ಚೇಳು ಕಚ್ಚಿಸಿಕೊಂಡವರು ಬಂದು ಗುಣಮುಖರಾಗಿ ತೆರಳುತ್ತಾರೆ. ಆದರೆ ವಿಧಿಯಾಟ ಎಂಬಂತೆ ದೇಗುಲದಲ್ಲೇ ಹಾವಿನಿಂದ ಕಚ್ಚಿಸಿಕೊಂಡು ಮಗು ಮೃತಪಟ್ಟಿದೆ.
ಸಂತೇಮರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
-ಗುಳಿಪುರ ನಂದೀಶ