ರಾಜ್ಯ

ರಾಜ್ಯದಲ್ಲಿ ಶೇ.25ರಷ್ಟು ಐಎಲ್ಐ ಪ್ರಕರಣಗಳನ್ನಷ್ಟೇ ಪರೀಕ್ಷೆಗೊಳಪಡಿಸಲಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ: ತಜ್ಞರು

Manjula VN

ಬೆಂಗಳೂರು: ಉಸಿರಾಟ (ಸಾರಿ) ಸಮಸ್ಯೆ, ಸಾಂಕ್ರಾಮಿಕ ರೀತಿಯ (ಐಎಲ್ಐ) ಕಾಯಿಲೆಗಳಿಂದ ಬಳಲುತ್ತಿರುವವರುವವರೇ ಕೊರೋನಾಗೆ ಹೆಚ್ಚಾಗಿ ತುತ್ತಾಗುತ್ತಿದ್ದು, ಈ ನಡುವಲ್ಲೇ ರಾಜ್ಯದಲ್ಲಿ ಕೇವಲ ಶೇ.25ರಷ್ಟು ಐಎಲ್ಐ ಪ್ರಕರಣಗಳನ್ನಷ್ಟೇ ಪರೀಕ್ಷೆಗೊಳಪಡಿಸಲಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಕೋವಿಡ್ ತಜ್ಞರ ಸಮಿತಿಯಲ್ಲಿ ಸದಸ್ಯರಾಗಿರುವ ಡಾ.ಗಿರಿಧರ್ ಬಾಬು ಮಾತನಾಡಿ, ಪರೀಕ್ಷೆಯ ಸಂಖ್ಯೆಯನ್ನು ನಾವು ಹೆಚ್ಚಿಸಬೇಕಿದೆ. ಸಾರಿ ಹಾಗೂ ಐಎಲ್ಐ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಪ್ರಕರಣಗಳ ಮೇಲೆ ಹೆಚ್ಚಿನ ಗಮನಹರಿಸಬೇಕಿದೆ. ರಾಜ್ಯದಲ್ಲಿ ಈ ವರೆಗೆ ಶೇ.25ರಷ್ಟು ಮಾತ್ರ ಐಎಲ್ಐ ಪ್ರಕರಣಗಳ ಪರೀಕ್ಷೆ ಮಾಡಿರುವುದು ಉತ್ತಮ ಸಂಕೇತವಲ್ಲ. ಇದೂವರೆಗೂ ಐಎಲ್ಐ ಲಕ್ಷಣಗಳಿರುವ 20,834 ಮಂದಿಯನ್ನಷ್ಟೇ ಪರೀಕ್ಷೆಗೊಳಪಡಿಸಿರುವುದು ವರದಿಯಲ್ಲಿ ಬಹಿರಂಗಗೊಂಡಿದೆ. ಲಕ್ಷಣಗಳು ಕಂಡು ಬಂದಿರುವ ಪ್ರತೀಯೊಬ್ಬರನ್ನು ಪರೀಕ್ಷೆಗೊಳಪಡಿಸುವ ಅಗತ್ಯವಿದೆ. ಇಂತಹ ಸಮಸ್ಯೆ ಎದುರಿಸುತ್ತಿರುವವರು ಅತ್ಯಂತ ಅಪಾಯದಲ್ಲಿರುತ್ತಾರೆಂದು ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಶೇ.2.3 ರಷ್ಟು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೆ, ಬಾಗಲಕೋಟೆಯಲ್ಲಿ ಶೇ.1.0 ಉಳಿದಂತೆ ಬೇರೆಲ್ಲಾ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಶೇಕಡಾವಾರು ವರದಿಯಾಗಿದೆ. ಪ್ರತೀ ಜಿಲ್ಲೆಯಲ್ಲಿ ಇದರ ಶೇಕಡಾವಾರು 1-2.5ರಷ್ಟಿರಬೇಕು. 

ಜಯನಗರ ಅಪೋಲೋ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರವೀಂದ್ರ ಮೆಹ್ದಾ ಎಂ ಮಾತನಾಡಿ, ಸಾರಿ, ಐಎಲ್ಐ ಪ್ರಕರಣಗಳನ್ನು ಹೆಚ್ಚಾಗಿ ಪರೀಕ್ಷೆಗೊಳಪಡಿಸಬೇಕು. ಸಾಕಷ್ಟು ಮಂದಿ ತಮ್ಮಲ್ಲಿ ಲಕ್ಷಣಗಳು ಕಂಡು ಬಂದಿದ್ದರೂ, ಸಾಮಾನ್ಯ ಶೀತ ಎಂದು ನಿರ್ಲಕ್ಷಿಸುತ್ತಿದ್ದಾರೆಂದು ತಿಳಿಸಿದ್ದಾರೆ. 

SCROLL FOR NEXT