ರಾಜ್ಯ

ಕೋವಿಡ್‌ನ ಆರಂಭಿಕ ಲಕ್ಷಣವುಳ್ಳವರು ಗುಣಮುಖರಾದ ನಂತರ ಗಂಟಲು ದ್ರವದ ಪರೀಕ್ಷೆ ಬೇಕಿಲ್ಲ; ಆರೋಗ್ಯ ಇಲಾಖೆ

Lingaraj Badiger

ಬೆಂಗಳೂರು: ಇನ್ನು ಮುಂದೆ ಕೋವಿಡ್ ರೋಗ ಲಕ್ಷಣಗಳಿಲ್ಲದ ಮತ್ತು ಆರಂಭಿಕ ಹಂತದ ಲಕ್ಷಣಗಳನ್ನು ಹೊಂದಿದವರು ಗುಣಮುಖರಾದ ನಂತರ ಮತ್ತೊಮ್ಮೆ ಕೋವಿಡ್-19 ಪರೀಕ್ಷೆ ನಡೆಸದೆಯೇ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತದೆ.

ಈ ಕುರಿತು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದು, ಕೋವಿಡ್ ಲಕ್ಷಣಗಳಿಲ್ಲದ ರೋಗಿಗಳಿಗೆ ಗಂಟಲು ದ್ರವ ಸಂಗ್ರಹಿಸಿದ ದಿನಗಳಿಂದ ಹತ್ತು ದಿನಗಳವರೆಗೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಿ ಗುಣಮುಖರಾದ ನಂತರ ಮನೆಗೆ ಕಳುಹಿಸಬಹುದು. ಈ ಸಂದರ್ಭದಲ್ಲಿ ದೇಹದ ಉಷ್ಣಾಂಶವನ್ನು ತಪಾಸಣೆ ನಡೆಸಿದರೆ ಸಾಕು. ಆದರೆ, ಮನೆಗೆ ತೆರಳಿದ ಬಳಿಕ 14 ದಿನಗಳು ಕಡ್ಡಾಯವಾಗಿ ಮನೆ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.

ಜ್ವರ, ಶೀತ, ನೆಗಡಿಯಂತಹ ಲಕ್ಷಣಗಳಿರುವ ರೋಗಿಗಳು ಗುಣಮುಖರಾದ 13 ದಿನಗಳ ನಂತರ ಯಾವುದೇ ಪರೀಕ್ಷೆಯಿಲ್ಲದೆ ಮನೆಗೆ ಕಳುಹಿಸಬಹುದು. ಆದರೆ, ಸೋಂಕಿನಿಂದ ಅಸ್ವಸ್ಥರಾಗಿರುವವರು, ಮಧುಮೇಹ, ಅಧಿಕ ರಕ್ತದೊತ್ತಡ, ಎಚ್‌ಐವಿ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ಅವರು ಗುಣಮುಖರಾದ ನಂತರ ಕೋವಿಡ್ ಪರೀಕ್ಷೆ ನಡೆಸಬೇಕು ಎಂದು ಸುತ್ತೋಲೆ ತಿಳಿಸಿದೆ.

SCROLL FOR NEXT