ರಾಜ್ಯ

ವಿಧಾನಸಭೆಯಲ್ಲಿ ಧರಣಿ, ಗದ್ದಲದ ಮಧ್ಯೆ ವಿಧೇಯಕಗಳ ಮಂಡನೆ, ವಂದನಾ ನಿರ್ಣಯ ಅಂಗೀಕಾರ

Lingaraj Badiger

ಬೆಂಗಳೂರು: ಹಿರಿಯ ಹೋರಾಟಗಾರ ದೊರೆಸ್ವಾಮಿ ವಿರುದ್ಧದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿಚಾರದಲ್ಲಿ ನಡೆಯುತ್ತಿದ್ದ ಧರಣಿ ನಡುವೆಯೇ ಹಲವು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. 

ಬಳಿಕ ಗದ್ದಲದ ನಡುವೆ ಸ್ಪೀಕರ್ ಎಂಟು ವಿಧೇಯಕಗಳ ಮಂಡನೆಗೆ ಅನುಮತಿ ನೀಡಿದ್ದು, ಗದ್ದಲದ ಮಧ್ಯೆಯೇ ಎಂಟು ವಿಧೇಯಕಗಳನ್ನು ಮಂಡಿಸಲಾಯಿತು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ ಮಂಡಿಸಿ ಅನುಮೋದನೆ ಪಡೆದುಕೊಂಡರು. 

ಬಳಿಕ ಮುಖ್ಯಮಂತ್ರಿ ಅವರು 2020ನೇ ಸಾಲಿನ ಕರ್ನಾಟಕ ಪೌರ ಸೇವೆಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಬಹಿರಂಗ ಸ್ಥಳಗಳ ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ ತಿದ್ದುಪಡಿ ವಿಧೇಯಕ, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ, ಕರ್ನಾಟಕ ರೇಸ್ ಕೋರ್ಸ್ ಗಳಿಗೆ ಪರವಾನಗಿ ನೀಡುವ ತಿದ್ದುಪಡಿ ವಿಧೇಯಕಗಳಿಗೂ ಸದನದಲ್ಲಿ ಅನುಮೋದನೆ ಪಡೆದುಕೊಂಡರು.  

ಉಪಮುಖ್ಯಮಂತ್ರಿ ಡಾ. ಸಿ.ಎಸ್. ಅಶ್ವತ್ಥ ನಾರಾಯಣ್ ಅವರು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ ಮಂಡನೆ, ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ವೇತನ ಮತ್ತು ನಿವೃತ್ತಿ ವೇತನಗಳ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಿದರು. 

ಕಂದಾಯ ಸಚಿವ ಆರ್. ಅಶೋಕ್ ಅವರು, ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ, ಕರ್ನಾಟಕ ಸರ್ವಜ್ಞ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ವಿಧೇಯಕ ಮಂಡಿಸಿ ಅನುಮೋದನೆ ಪಡೆದುಕೊಂಡರು.

SCROLL FOR NEXT