ರಾಜ್ಯ

ಲಯ ಅನುಲಾಸ್ಯ: ಮಾ.07 ಕ್ಕೆ ಬಹುಮುಖ ಪ್ರತಿಭೆ ಅನುಷ ಭರತನಾಟ್ಯ ರಂಗಪ್ರವೇಶ 

Srinivas Rao BV

ಬೆಂಗಳೂರು: ಬಹುಮುಖ ಪ್ರತಿಭೆ ಕುಮಾರಿ ಅನುಷಾ ಅವರ ಭರತನಾಟ್ಯ ರಂಗಪ್ರವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. 

ಮಾ.07 (ಶನಿವಾರ) ಸಂಜೆ 6 ಗಂಟೆಗೆ ಬೆಂಗಳೂರಿನ ಜಯಚಾಮರಾಜ ರಸ್ತೆಯಲ್ಲಿರುವ ಎಡಿಆರ್ ರಂಗಮಂದಿರದಲ್ಲಿ ’ಲಯ ಅನುಲಾಸ್ಯ’ ಭರತನಾಟ್ಯ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಆಶಾ ಮತ್ತು ಸೋಮಶೇಖರ್ ಅವರ ಪುತ್ರಿ ಅನುಷಾ ಆರ್ ಎನ್ಎಸ್ಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದು, ಭರತನಾಟ್ಯ ಕಲಿಕೆ ಪ್ರಾರಂಭಿಸಿದ್ದು ವಿದೂಷಿ ಅರ್ಚನಾ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ 6 ನೇ ವಯಸ್ಸಿನಲ್ಲಿ. ಭರತನಾಟ್ಯದ ಜೊತೆಗೆ ವ್ಯಂಗ್ಯಚಿತ್ರ ರಚನೆ, ನಾಟಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ. 

ಕಾರ್ಮಲ್ ಮತ್ತು ಕುಮಾರನ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಅನುಷಾ ಅವರು ಚರ್ಚಾಸ್ಪರ್ಧೆ, ಆಶುಭಾಷಣ ಸ್ಪರ್ಧೆ,ನಾಟಕಗಳಲ್ಲಿ ಭಾಗವಹಿಸಿ  ಏಕಪಾತ್ರಾಭಿನಯದಲ್ಲಿ ಸತತ 5 ವರ್ಷ ಬಹುಮಾನ ಗಳಿಸಿ ಮಾದರಿಯಾಗಿದ್ದಾರೆ.

ವಿದ್ಯಾರ್ಥಿ ಜೀವನದ ಹಂತದಲ್ಲೇ ಧ್ವನಿ ಆಧಾರಿತ ಚಾಟ್-ಬೋಟ್ಸ್ ಕುರಿತು ತೌಲನಿಕ ಅಧ್ಯಯನ ಮಾಡಿರುವುದು, ಅಬಾಕಸ್ ನಲ್ಲಿ ರಾಜ್ಯಮಟ್ಟದ ಸ್ವರ್ಣ ಪದಕ, ಕನ್ನಡ, ಹಿಂದಿ, ಸಂಸ್ಕೃತ ಉನ್ನತ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವುದು ಅನುಷ ಅವರ ಮತ್ತೊಂದು ಹೆಗ್ಗಳಿಕೆ. 

ಭರತನಾಟ್ಯಕ್ಕಾಗಿ 2007 ರಲ್ಲಿ ವಿಶ್ವಕಲಾರತ್ನ, ಮೈತ್ರಿ ಸಂಸ್ಕೃತ, ಸಂಸ್ಕೃತಿ, ಜ್ಞಾನ ಮಿತ್ರ ಪ್ರತಿಭಾ ಪುರಸ್ಕಾರಗಳಿಗೆ ಭಾಜನರಾಗಿರುವ ಈ  ಪ್ರತಿಭಾಶಾಲಿ, ಅದಮ್ಯ ಚೇತನ, ಕರ್ನಾಟಕ ರಾಜ್ಯ ಸರ್ಕಾರ 2011 ರಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭ, 51ನೇ ಬೆಂಗಳೂರು ಗಣೇಶ ಉತ್ಸವ, ಶ್ರೀರಾಘವೇಂದ್ರ ಆರಾಧನಾ ಉತ್ಸವ, ಸಂಧ್ಯಾ ಲಾಸ್ಯ ಸಂಸ್ಥೆಯ ಉಲ್ಲಾಸ ಕಾರ್ಯಕ್ರಮ, ಶಂಕರಪುರದ ರಾಮಸೇವಾ ಮಂಡಳಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಗಳಲ್ಲಿ ಭರತ ನಾಟ್ಯ ಪ್ರದರ್ಶನ ನೀಡಿದ್ದಾರೆ.

SCROLL FOR NEXT