ಬೆಂಗಳೂರು: ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರ ಹಸಿರು ಸೂಚ್ಯಂಕವನ್ನು ಜಾರಿಗೆ ತಂದಿದೆ.
ಅದನ್ನು ಸರ್ಕಾರದ ನಿರ್ದೇಶನ, ಮಾರ್ಗಸೂಚಿ ಮತ್ತು ನೀತಿಗಳ ಆಂತರಿಕ ಭಾಗವಾಗಿ ರೂಪಿಸಲಾಗುತ್ತದೆ. ದೇಶದಲ್ಲಿಯೇ ಇಂತಹ ಪರಿಕಲ್ಪನೆ ಆರಂಭಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಆರಂಭದಲ್ಲಿ ಪಶು ಸಂಗೋಪನೆ, ಅರಣ್ಯ, ಕೃಷಿ ಸೇರಿದಂತೆ 20 ಇಲಾಖೆಗಳನ್ನು ಈ ಹಸಿರು ಸೂಚ್ಯಂಕದಡಿಯಲ್ಲಿ ಸೇರಿಸಲಾಗುತ್ತದೆ.
ಈ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿರುವ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆ(ಇಎಂಪಿಆರ್ ಐ), ಬಹುತೇಕ ಸರ್ಕಾರದ ಯೋಜನೆಗಳಲ್ಲಿ ನಾವು ನೀತಿಯ ವಿಷಯಗಳನ್ನು ನೋಡುತ್ತೇವೆ. ಉದಾಹರಣೆಗೆ ಸಾರಿಗೆ ವಿಚಾರ ತೆಗೆದುಕೊಂಡರೆ ಸೂಚ್ಯಂಕ ಮೌಲ್ಯಮಾಪನಕ್ಕೆ ಪರಿಸಹ ಸ್ನೇಹಿ ಕ್ರಮಗಳನ್ನು ನೋಡಲಾಗುತ್ತದೆ. ಹೊರಸೂಸುವಿಕೆ ಕಡಿತ, ಜಿಹೆಚ್ ಸಿ ಹೊರಸೂಸುವಿಕೆ, ಶಕ್ತಿ ದಕ್ಷತೆಯ ಇಂಧನ ಮತ್ತು ಅರಣ್ಯೀಕರಣದಂತಹ ವಿಷಯಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಅದರ ಅಧಿಕಾರಿಗಳು ತಿಳಿಸಿದರು.
ಇಎಂಪಿಆರ್ ಐ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಸೂಚ್ಯಂಕವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಕಡು ಹಸಿರು, ತಿಳಿ ಹಸಿರು, ಕೇಸರಿ ಮತ್ತು ಕೆಂಪು. ಸೊನ್ನೆಯಿಂದ 5ರವರೆಗೆ ಅಂಕ ಪಟ್ಟಿಯನ್ನು ತಯಾರಿಸಾಗುತ್ತಿದ್ದು, ಇದರಲ್ಲಿ ಸಿಗುವ ಅಂಕಗಳ ಆಧಾರದ ಮೇಲೆ ಇಲಾಖೆಗಳಿಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗುತ್ತದೆ.
ಈ ಸೂಚ್ಯಂಕದ ಪರಿಣಾಮಕಾರಿ ಜಾರಿಯ ಕೆಲಸದ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಹಿಸಲಾಗಿದೆ. ಮಾರ್ಗಸೂಚಿ ಸರಿಯಾಗಿ ಜಾರಿಯಾಗುತ್ತಿದೆಯೇ ಎಂದು ನೋಡಲು ಪ್ರತ್ಯೇಕ ತಂಡವನ್ನು ಸಹ ರಚಿಸಲಾಗುತ್ತದೆ. ಸರ್ಕಾರದ ಪ್ರತಿ ಇಲಾಖೆ ಸಹ ಪ್ರತ್ಯೇಕ ಪರಿಸರ ವಿಭಾಗವನ್ನು ರಚಿಸಿ ಮಾರ್ಗಸೂಚಿಯನ್ನು ಮೌಲ್ಯಮಾಪನ ಮಾಡಬಹುದಾಗಿದೆ. ಸರ್ಕಾರದ ಪ್ರತಿ ಯೋಜನೆ ಪರಿಸರದ ಮೇಲೆ ಪರಿಣಾಮ ಬೀರುವುದರಿಂದ ಕರ್ನಾಟಕದಲ್ಲಿ ಈ ಹಸಿರು ಸೂಚ್ಯಂಕ ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.