ಮಂಗಳೂರು: ದುಬೈನಿಂದ ಆಗಮಿಸಿದ 35 ವರ್ಷದ ಪ್ರಯಾಣಿಕನಲ್ಲಿ ಯಾವುದೇ ಕೊರೋನಾ ವೈರಸ್ ಇಲ್ಲವೇ ಎಚ್ 1ಎನ್ 1 ಸೋಂಕು ಕಂಡುಬಂದಿಲ್ಲ ಎಂದು ಮಂಗಳೂರು ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ಮಾಹಿತಿ ನೀಡಿದ್ದಾರೆ.
ಪ್ರಯಾಣಿಕನನ್ನು ಬಂಟ್ವಾಳ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಮನೆಯಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದುಬೈನಿಂದ ಮಾ.8ರಂದು ಆಗಮಿಸಿದ್ದ ವ್ಯಕ್ತಿಯಲ್ಲಿ ಜ್ವರದ ಲಕ್ಷಣಗಳು ಕಂಡುಬಂದಿದ್ದರಿಂದ ತಕ್ಷಣ ಅವರನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಅಲ್ಲಿಂದ ಪರಾರಿಯಾಗಿದ್ದರು. ನಂತರ ಅವರನ್ನು ಪತ್ತೆಹಚ್ಚಿ ಬಂಟ್ವಾಳ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ರಕ್ತ ಹಾಗೂ ಇತರ ಮಾದರಿಗಳನ್ನು ಹಾಸನ ವೈದ್ಯಕೀಯ ಸಂಸ್ಥೆಯ ವೈರಾಣು ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿತ್ತು.
ಏತನ್ಮಧ್ಯೆ, ಆರು ರೋಗಿಗಳಲ್ಲಿ ಕೋವಿಡ್-19 ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ. ಇಲ್ಲಿಯರೆಗೆ ಜಿಲ್ಲೆಯಲ್ಲಿ 49 ಜನರು ತಮ್ಮ 28 ದಿನಗಳ ತಪಾಸಣೆಯನ್ನು ಪೂರ್ಣಗೊಳಿಸಿದ್ದಾರೆ.