ರಾಜ್ಯ

ಕೊರೊನಾವೈರಸ್ ಭೀತಿ; ಆದಿಚುಂಚನಗಿರಿ ಮಠಕ್ಕೆ ಭಕ್ತರ ಪ್ರವೇಶಕ್ಕಿಲ್ಲ ಅವಕಾಶ

Manjula VN

ಮಂಡ್ಯ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಆದಿಚುಂಚನಗಿರಿ ದೇವಸ್ಥಾನವನ್ನು ಬಂದ್ ಮಾಡಲಾಗಿದ್ದು ಭಕ್ತರು ಸದ್ಯಕ್ಕೆ ಕಾಲಭೈರವನ ದರ್ಶನಕ್ಕೆ ಬರೋದು ಬೇಡ ಅಂತ ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀ ಮನವಿ ಮಾಡಿದ್ದಾರೆ.

ಈ ಸಂಬಂಧ ಮಾಧ್ಯಮಪ್ರಕಟಣೆ ಹೊರಡಿಸಿರುವ ಶ್ರೀಗಳು,ಶ್ರೀ ಕಾಲಭೈರವೇಶ್ವರನ ದರ್ಶನಕ್ಕೆ ಶನಿವಾರ ಮತ್ತು ಭಾನುವಾರ ಕಾಲಭೈರವನ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇತ್ತೀಚೆಗೆ ವಿಶ್ವದಾದ್ಯಂತ ಹರಡಿರುವ ಕೊರೊನಾ ಹಿನ್ನೆಲೆಯಲ್ಲಿ ಮುಂದಿನ ೨ ವಾರಗಳ ಕಾಲ ಭಕ್ತರು ದೇವರ ದರ್ಶನಕ್ಕೆ ಆಗಮಿಸೊದು ಬೇಡ ,ಇದಕ್ಕೆ ಭಕ್ತರು ಸಹಕರಿಸಬೇಕಾಗಿ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ವೈರಸ್ ನಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದಕ್ಕಾಗಿ ಸದ್ಯದ ಪರಿಸ್ಥಿತಿ ಸುಧಾರಿಸುವವರೆಗೂ ಪ್ರತಿ ಶನಿವಾರ ಮತ್ತು ಭಾನುವಾರ ಶ್ರೀ ಕ್ಷೇತ್ರಯಾತ್ರೆ ಕೈಗೊಳ್ಳುವ ಭಕ್ತರು ತಮ್ಮ ಯಾತ್ರೆಯನ್ನು ಕನಿಷ್ಠ ಎರಡು ವಾರಗಳ ಕಾಲ ತಾತ್ಕಾಲಕವಾಗಿ ಮುಂದೂಡುವುದು ಅವಶ್ಯವಾಗಿದೆ,ಪರಿಸ್ಥಿತಿ ಸುಧಾರಿಸಿದ ನಂತರದ ದಿನಗಳಲ್ಲಿ ಭಕ್ತರು ತಮ್ಮ ಯಾತ್ರೆಯನ್ನು ಕೈಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

ಕೊರೊನ ಸೋಂಕಿತರ ಚಿಕಿತ್ಸೆಗಾಗಿ ಶ್ರೀ ಮಠದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ಗಳನ್ನು ತೆರೆದು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ಕೊರೋನಾ ಸೋಂಕಿತರು ಶ್ರೀಮಠದ ಆಸ್ಪತ್ರೆಗೆ ಭೇಟಿ ಕೊಟ್ಟು ಅಗತ್ಯ ಮಾಹಿತಿ,ಚಿಕಿತ್ಸಾ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮತ್ತೊಂದೆಡೆ ಕೊರೊನಾ ಎಫೆಕ್ಟ್ ನಿಂದಾಗಿ ಇಂದಿನಿಂದ ನಂಜನಗೂಡಿನ ಶ್ರೀ ನಂಜುಡೇಶ್ವರನ ದರ್ಶನ ಭಕ್ತರಿಗೆ ಇಲ್ಲ. ಕೊರೊನಾದಿಂದಾಗಿ ನಂಜನಗೂಡು ದೇವಾಲಯವನ್ನು ಬಂದ್ ಮಾಡಲಾಗಿದೆ. ದೇವಾಲಯಕ್ಕೆ ಇಂದಿನಿಂದ ಭಕ್ತಾದಿಗಳ ಪ್ರವೇಶ ನಿಷೇಧವಿದ್ದು ದೇವಾಲಯದ ಮುಂಬಾಗಿಲು ಮುಚ್ಚಲಾಗಿದೆ. ಮಾರ್ಚ್ ೩೧ರವರೆಗೆ ದೇವಾಲಯ ಭಕ್ತರು ಹಾಗೂ ಸಾರ್ವಜನಿಕರ ಪ್ರವೇಶ ಇಲ್ಲ ಎಂದು ನೋಟಿಸ್ ಆಂಟಿಸಲಾಗಿದೆ. ದೇವಾಲಯದಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆದಿವೆ.

SCROLL FOR NEXT