ರಾಜ್ಯ

ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಯುವಕ ಸಾವು ಪ್ರಕರಣ; ಬಸ್‍ ಮಾಲೀಕರ ವಿರುದ್ಧ ಕಠಿಣ ಕ್ರಮ: ರಾಜ್ಯ ಸರ್ಕಾರ

Srinivasamurthy VN

ಬೆಂಗಳೂರು: ಹೃದಯಾಘಾತಕ್ಕೊಳಗಾದ ಯುವಕನಿಗೆ ಚಿಕಿತ್ಸೆ ಕೊಡಿಸದೆ ಮಾರ್ಗ ಮಧ್ಯೆದಲ್ಲೇ ಆತನ ಸಾವಿಗೆ ಕಾರಣರಾದ ಖಾಸಗಿ ಬಸ್‍ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಹೇಳಿದೆ.

ವಿಧಾನಸಭೆಯಲ್ಲಿ ನಿನ್ನೆ ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಹೃದಯಾಘಾತಕ್ಕೊಳಗಾದ ಯುವಕನಿಗೆ ಚಿಕಿತ್ಸೆ ಕೊಡಿಸದೆ ಮಾರ್ಗ ಮಧ್ಯೆದಲ್ಲೇ ಆತನ ಸಾವಿಗೆ ಕಾರಣರಾದ ಖಾಸಗಿ ಬಸ್‍ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಶೂನ್ಯ ವೇಳೆಯಲ್ಲಿ ಶಾಸಕ ಉಮಾನಾಥ್ ಕೊಟ್ಯಾನ್ ಅವರು ವಿಷಯ ಪ್ರಸ್ತಾಪಿಸಿ, ಮಾರ್ಚ್ 7 ರಂದು ಸುಹಾನ್ ಎಂಬ 22 ವರ್ಷದ ಇಂಜನಿಯರಿಂಗ್ ವಿದ್ಯಾರ್ಥಿ ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುವ ದುರ್ಗಾಂಬ ಟ್ರಾವೆಲ್ಸ್ ಬಸ್‍ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಸಕಲೇಶಪುರ ಬಳಿ ಬರುತ್ತಿದ್ದಂತೆ ಆತನಿಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ಆತ ತಕ್ಷಣ ನಿರ್ವಾಹಕರಿಗೆ ವಿಷಯ ತಿಳಿಸುತ್ತಾನೆ. ಆದರೆ, ಪೈಪೋಟಿಯಲ್ಲಿದ್ದ ಚಾಲಕ ಮತ್ತು ನಿರ್ವಾಹಕರು ಬಸ್ ನಿಲ್ಲಿಸುವುದಿಲ್ಲ. ಇನ್ನು ಸ್ವಲ್ಪ ದೂರ ಬಂದಾಗ ಎದೆ ನೋವು ಜೋರಾಗುತ್ತದೆ. ಆಗಲೂ ಬಸ್ ನಿಲ್ಲಿಸುವಂತೆ ಯುವಕ ಮನವಿ ಮಾಡಿಕೊಳ್ಳುತ್ತಾನೆ. ಆದರೆ, ಸಿಬ್ಬಂದಿ ಕೇಳುವುದಿಲ್ಲ. ಕೊನೆಗೆ ಮಾರ್ಗ ಮಧ್ಯದಲ್ಲೇ ಯುವಕ ಬಸ್‍ನಲ್ಲೇ ಪ್ರಾಣ ಕಳೆದುಕೊಳ್ಳುತ್ತಾನೆ.

ಯುವಕನ ತಾಯಿಯ ರೋಧನೆ ಕೇಳಲಾಗುತ್ತಿಲ್ಲ. ಖಾಸಗಿ ಬಸ್‍ಗಳು ವೇಗದ ಪೈಪೋಟಿಗಿಳಿದು ಮಧುಮೇಹಿಗಳು ಮೂತ್ರ ವಿಸರ್ಜನೆ ಮಾಡಬೇಕೆಂದರೂ ಬಸ್ ನಿಲ್ಲಿಸುತ್ತಿಲ್ಲ. ಈ ರೀತಿಯ ಖಾಸಗಿ ಬಸ್‍ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಿದ ಗೃಹ ಸಚಿವರು, ಬಸ್ ನಿಲ್ಲಿಸದೆ ಯುವಕನ ಪ್ರಾಣ ಹಾನಿಗೆ ಕಾರಣರಾಗಿದ್ದರೆ ಅದು ಅಪರಾಧ. ಸಾರಿಗೆ ಸಚಿವರಿಂದ ಪ್ರಕರಣದ ಬಗ್ಗೆ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

SCROLL FOR NEXT