ತುಮಕೂರು: ಕೊರೋನಾ ವೈರಸ್ ಭೀತಿ, ಜನತಾ ಕರ್ಫ್ಯೂ ನಡುವಲ್ಲೂ ತುಮಕೂರಿನ ಜೋಡಿಗಳು ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದೆ.
ಮಂಜುನಾಥಅ ಎನ್ ಹಾಗೂ ರಂಜಿತಾ ಏಸ್.ವೈ ಎಂಬ ಜೋಡಿಗಳು ಜನತಾ ಕರ್ಫ್ಯೂ ನಡುವಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಿವಾಹ ಮಹೋತ್ಸವದಲ್ಲಿ 1,000 ಮಂದಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
ಶನಿವಾರ ಆರತಕ್ಷತೆ ನಡೆದಿದ್ದು, ಭಾನುವಾರ ಬೆಳಿಗ್ಗೆ ವಿವಾಹ ಮುಹೂರ್ತವನ್ನು ನೆರವೇರಿಸಲಾಗಿದೆ. ರಾತ್ರಿ ನಡೆದ ಆರತಕ್ಷತೆಯಲ್ಲಿ ಸುಮಾರು 500 ಮಂದಿ ಭಾಗಿಯಾಗಿದ್ದರೆ, ಮುಹೂರ್ತದಲ್ಲಿ 400 ಮಂದಿ ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ. ವಿವಾಹ ಕಾರ್ಯಕ್ರಮದ ವೇಳೆ ಯಾರೊಬ್ಬರೂ ಸಾಮಾಜಿಕ ಅಂತರವಾಗಲೀ, ಮುಂಜಾಗ್ರತಾ ಕ್ರಮಗಳನ್ನಾಗಲೀ ಅನುಸರಿಸಿಲ್ಲ ಎಂದು ತಿಳಿದುಬಂದಿದೆ.
ಇದರಂತೆ ತುಮಕೂರಿನಲ್ಲಿ ಮತ್ತೊಂದು ವಿವಾಹ ಕೂಡ ನಡೆದಿದೆ. ಕುಂಚಿಟಿಗ ಸಮುದಾಯ ಭವನದಲ್ಲಿ ಮಂತ್ರಮಾಂಗಲ್ಯ ವಿವಾಹ ನೆರವೇರಿದೆ.
ಉಪನ್ಯಾಸಕ ಹಾಗೂ ಹೋರಾಟಗಾರ ಕೊಟ್ಟ ಶಂಕರ್ ಹಾಗೂ ದಿವಂಗತ ಕವಿ ಕೆ.ಬಿ.ಸಿದ್ದಯ್ಯನವರ ಪುತ್ರಿ ಚೈತ್ರ ಅವರ ವಿವಾಹ ಮಂತ್ರ ಮಾಂಗಲ್ಯದ ಮೂಲಕ ನೆರವೇರಿತು.
ಬೆಳಿಗ್ಗೆ 10.30ಕ್ಕೆ ಆರಂಬವಾದ ಮಂತ್ರ ಮಾಂಗಲ್ಯ ಮದುವೆಗೆ ಸುಮಾರು 500 ಮಂದಿ ಸಾಕ್ಷಿಯಾದರು. ಲೇಖಕಿಮಲ್ಲಿಕಾ ಬಸವರಾಜು ಅವರು ಮಂತ್ರ ಮಾಂಗಲ್ಯವನ್ನು ಬೋಧಿಸಿದರು. ಲೇಖಕರು, ಸಾಹಿತಿಗಳು, ಸಂಬಂಧಿಕರು, ಹೋರಾಟಗಾರರು ಹೀಗೆ ನೂರಾರು ಮಂದಿ ಮದುವೆಗೆ ಸಾಕ್ಷಿಯಾದರು.