ರಾಜ್ಯ

ಯಶಸ್ವಿಗೊಂಡ ಜನತಾ ಕರ್ಫೂ: ಕೃಷಿ ಕಾರ್ಯದಿಂದ ದೂರ ಉಳಿದು ಬೆಂಬಲ ವ್ಯಕ್ತಪಡಿಸಿದ ರೈತರು

Manjula VN

ಮೈಸೂರು: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಮೈಸೂರು ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸದಾ ಜನದಟ್ಟಣೆಯಿಂದ ಕೂಡಿದ್ದ ಮೈಸೂರು ನಗರದಲ್ಲಿ ಭಾನುವಾರ ನೀರವ ಮೌನ ಆವರಿಸಿತ್ತು. ಪ್ರತೀನಿತ್ಯ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದ ರೈತರೂ ತಮ್ಮ ಕಾರ್ಯಗಳನ್ನು ಸ್ಥಗಿತಗೊಳಿಸಿ, ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ್ದರು. 

ಕೃಷಿ ಕಾರ್ಯದಿಂದ ದೂರ ಉಳಿದಿದ್ದ ರೈತರು ದಿನಪತ್ರಿಕೆ ಓದುವುದು, ಟಿವಿ ನೋಡುವ ಕಾರ್ಯದಲ್ಲಿ ನಿರತರಾಗಿದ್ದರು. ಗಡಿಗಳು ಬಂದ್ ಆಗಿದ್ದ ಕಾರಣ ಬೆಂಗಳೂರು-ಮೈಸೂರು ರಸ್ತೆ, ಬಸ್ ನಿಲ್ದಾಣಗಳು, ರೈಲ್ವೇ ನಿಲ್ದಾಣಗಳು, ಮೈಸೂರು-ಊಟಿ, ಕೋಲ್ಕತಾ ಮತ್ತು ಕೊಯಿಮತ್ತೂರು ರಸ್ತೆಗಳು ಬಿಕೋ ಎನ್ನುತ್ತಿದ್ದವು. ಈ ನಡುವೆ ಮಂಡ್ಯ ಜಿಲ್ಲಾ ಆಡಳಿತ ಮಂಡಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಎಲ್ಲಾ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ಮಾರ್ಚ್.27 ವರೆಗೂ ಬಂದ್ ಮಾಡುವಂತೆ ಆದೇಶ ನೀಡಿದ್ದಾರೆ. 

ಅಲ್ಲದೆ, ಮೈಸೂರು ವ್ಯಕ್ತಿಯಲ್ಲಿ ವೈರಸ್ ಕಾಣಿಸಿಕೊಂಡಿದ್ದು, ಈ ವ್ಯಕ್ತಿ ಟ್ಯಾಕ್ಸಿಯೊಂದರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಸಂಚಾರ ಮಾಡಿದ್ದಾನೆ. ಸಂಚಾರದ ಮಧ್ಯೆ ಹೆದ್ದಾರಿಯ ಟೀ ಅಂಗಡಿಯಲ್ಲಿ ಟೀ ಕುಡಿದಿದ್ದು, ಇದೀಗ ಟೀ ಅಂಗಡಿಯ ಮಾಲೀಕ ಹಾಗೂ ಸಿಬ್ಬಂದಿಗಳನ್ನೂ 12 ದಿನಗಳ ಕಾಲ ಪ್ರತ್ಯೇಕ ಕೊಠಡಿಯಲ್ಲಿರಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಇನ್ನು ಜನತಾ ಕರ್ಫ್ಯೂ ನಡುವಲ್ಲೂ ಸೂರ್ಯ ಮೂಡುವುದರೊಳಗೆ ಜೋಡಿಗಳು ಸಪ್ತಪದಿ ತುಳಿದಿರುವ ಘಟನೆ ಭಾನುವಾರ ನಡೆಯಿತು. 

ಮೈಸೂರಿನ ಪಡುವಾರಹಳ್ಳಿ ವರಸಿದ್ದಿ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರವೀಣ್-ಅಕ್ಷತಾ ಮದುವೆ ನೆರವೇರಿತು. ಇಬ್ಬರು ಒಂಟಿಕೊಪ್ಪಲಿನ ನಿವಾಸಿಗಳಾಗಿದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಬಂಧುಬಳಗದವರು ಸೇರಿ ವಿವಾಹಕ್ಕೆ ಶುಭ ಹಾರೈಸಿದರು. ಬೇರೆಯವರಿಗೆ ತೊಂದರೆ ಕೊಡಬಾರದು ಎಂಬ ಕಾರಣಕ್ಕೆ ಸರಳವಾಗಿ ಮದುವೆಗೆ ಉಭಯ ಕುಟುಂಬಗಳು ಒಪ್ಪಿದ್ದವು. ಹಾಗಾಗಿ 7 ಗಂಟೆಯೊಳಗೆ ಮಾಂಗಲ್ಯಧಾರಣೆ ಮುಗಿಸಿದ ನವಜೋಡಿ ಗುರು ಹಿರಿಯ ಆಶೀರ್ವಾದ ಪಡೆದರು. 

SCROLL FOR NEXT