ಬೆಂಗಳೂರು: ಇ-ಕಾಮರ್ಸ್ ಸಂಸ್ಥೆಗಳು ಕೊರೋನಾ ವೈರಸ್ ಭೀತಿಯಿಂದ ಆನ್ ಲೈನ್ ವಹಿವಾಟುಗಳನ್ನು ಸ್ಥಗಿತಗೊಳಿಸಿರುವುದರಿಂದ ಜನತೆಗೆ ಸಮಸ್ಯೆಯುಂಟಾಗಿದ್ದು ಈ ಬಗ್ಗೆ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿ ಜನತೆಗೆ ಅಗತ್ಯ ವಸ್ತುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ,
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ನಾನು ಇಂದು ಸಾಯಂಕಾಲ 7 ಗಂಟೆಗೆ ಇ-ಕಾಮರ್ಸ್ ಆಹಾರ, ವೈದ್ಯಕೀಯ, ದಿನಸಿ, ತರಕಾರಿ, ಹಣ್ಣು ಮತ್ತು ಪ್ರಾಣಿಮೂಲ ಉತ್ಪನ್ನಗಳನ್ನು ಒದಗಿಸುವ ಸಂಸ್ಥೆಗಳ ಪ್ರತಿನಿಧಿಗಳನ್ನು ಬರಲು ಹೇಳಿದ್ದೇನೆ. ಅವರ ಜೊತೆ ನನ್ನ ಕಚೇರಿಯಲ್ಲಿ ಮಾತುಕತೆ ನಡೆಸಿ ಜನತೆಗೆ ಅಗತ್ಯ ಸೇವೆ ಒದಗಿಸುವಂತೆ ಕೋರುತ್ತೇನೆ ಎಂದರು.
ಆನ್ ಲೈನ್ ಪೂರೈಕೆ ಸಂಸ್ಥೆಗಳ ಪ್ರತಿನಿಧಿಗಳು ದಯವಿಟ್ಟು ಬನ್ನಿ, ಮಾತುಕತೆ, ಚರ್ಚೆ ಮಾಡೋಣ, ನಮ್ಮ ಕಡೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನಿಮಗೆ ನೀಡುತ್ತೇವೆ ಎಂದು ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.