ರಾಜ್ಯ

ಬೆಂಗಳೂರು: ಪರಾರಿಗೆ ಯತ್ನಸಿದ ಕೊಲೆ ಆರೋಪಿ ಕಾಲಿಗೆ ಗುಂಡೇಟು

Raghavendra Adiga

ಬೆಂಗಳೂರು: ರೌಡಿಶೀಟರ್ ಕೊಲೆ ಮಾಡಿದ ಆರೋಪಿ ಮೇಲೆ ಪೊಲೀಸರು ಸೋಮವಾರ ಬೆಳ್ಳಂಬೆಳಗ್ಗೆಯೇ ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಲಿಡ್ಕರ್ ಕಾಲೋನಿಯಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದಷ್ಟೇ ರೌಡಿಶೀಟರ್ ಬಿಜು ಅಲಿಯಾಸ್ ಬಾಗಲೂರು ಲೇಔಟ್​ನ ಬುಜ್ಜಿ (30) ಹತ್ಯೆ ಪ್ರಕರಣದ ಆರೋಪಿ ಸಂಜಯ್​ ಅಲಿಯಾಸ್ ಆ್ಯಂಡ್ರೂಸ್​ನನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

 ಈ ಸಂದರ್ಭದಲ್ಲಿ ಆರೋಪಿ ಸಂಜಯ್ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಲು ಯತ್ನಿಸಿದ್ದನು. ತಕ್ಷಣವೇ ಇನ್​ಸ್ಪೆಕ್ಟರ್ ಅಜಯ್ ಸಾರಥಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಆತನನ್ನು ಶರಣಾಗುವಂತೆ ಸೂಚಿಸಿದ್ದಾರೆ. 

ಆದರೂ, ಆತ ಮತ್ತೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದಾಗ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ಎದುರಾಳಿ ಡ್ಯಾನಿಯಲ್ ಗ್ಯಾಂಗ್ ಜತೆಗೆ ಗಲಾಟೆ ಮಾಡಿಕೊಂಡಿದ್ದ ಬಾಗಲೂರು ಲೇಔಟ್‌ನ ರೌಡಿಶೀಟರ್ ಬುಜ್ಜಿಯನ್ನು (30) ಶನಿವಾರ ಕೊಲೆ ಮಾಡಲಾಗಿತ್ತು.

SCROLL FOR NEXT