ಬೆಂಗಳೂರು: ಪಿಎಂ ಕೇರ್ ಫಂಡ್ ನಡಿ ಸಂಗ್ರಹವಾದ ಹಣವನ್ನು ಪಾರದರ್ಶಕತೆಯಿಂದ ಬಳಸುವ ಬದಲು ಪ್ರಧಾನ ಮಂತ್ರಿ ಕಾರ್ಯಾಲಯ ಬಚ್ಚಿಡುತ್ತಿದೆ ಎಂದು ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಪಿಎಂ ಕೇರ್ ಫಂಡ್ ನಡಿ ಕೋವಿಡ್-19 ಹಿನ್ನೆಲೆಯಲ್ಲಿ ಸಂಗ್ರಹವಾದ ಹಣವನ್ನು ವಲಸೆ ಕಾರ್ಮಿಕರ ಪ್ರಯಾಣ ದರದ ವೆಚ್ಚಕ್ಕೆ ಬಳಸಿಕೊಳ್ಳಬೇಕಾಗಿತ್ತು. ಜನರ ಸಹಾಯಕ್ಕೆಂದು ಸಂಗ್ರಹ ಮಾಡಿದ 35 ಸಾವಿರ ಕೋಟಿ ರೂಪಾಯಿಗಳು ಏನಾದವು ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಧಾನ ಮಂತ್ರಿ ಕಾರ್ಯಾಲಯ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಬಳಿ ರಾಜ್ಯದೊಳಗೆ ಮತ್ತು ಹೊರಗೆ ಎಷ್ಟು ಮಂದಿ ವಲಸೆ ಕಾರ್ಮಿಕರಿದ್ದಾರೆ ಎಂಬ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸರಿಯಾಗಿ ಕಳುಹಿಸಿಕೊಡಲು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಕರ್ನಾಟಕ ಕಾಂಗ್ರೆಸ್ ಬೇಡಿಕೆ ಸಲ್ಲಿಸಿತ್ತು. ಆದರೆ ಸರ್ಕಾರ ಈ ಬಗ್ಗೆ ಸೂಕ್ತ ಗಮನ ಹರಿಸಿಲ್ಲ ಎಂದರು.
ಆರಂಭದಲ್ಲಿ ರಾಜ್ಯ ಸರ್ಕಾರ ವಲಸೆ ಕಾರ್ಮಿಕರಿಗೆ ಬಸ್ ದರ ನಿಗದಿಪಡಿಸಿತ್ತು. ನಂತರವಷ್ಟೇ ಕಾಂಗ್ರೆಸ್ ನಿಂದ 1 ಕೋಟಿ ರೂಪಾಯಿ ಹಣ ನೀಡುವ ಬಗ್ಗೆ ಘೋಷಣೆಯಾಗಿದ್ದು. ರೈಲ್ವೆ ಪ್ರಯಾಣ ವೆಚ್ಚವನ್ನು ರಾಜ್ಯಗಳು ಭರಿಸಬೇಕೆಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳನ್ನು ಕೇಳುತ್ತಿದೆ.
ರೈಲ್ವೆ ಇಲಾಖೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತಿದ್ದು ಕೇಂದ್ರ ಸರ್ಕಾರವೇ ಬಜೆಟ್ ತಯಾರಿಸುವುದು. ಆದರೆ ಇದೀಗ ಶೇಕಡಾ 15ರಷ್ಟು ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕೆಂದು ಹೇಳುವುದು ಅಚ್ಚರಿಯನ್ನುಂಟುಮಾಡುತ್ತದೆ. ಶೇಕಡಾ 85ರಷ್ಟು ಭರಿಸುತ್ತೇವೆ ಎಂದು ಹೇಳುವ ಕೇಂದ್ರ ಸರ್ಕಾರದ ಹೇಳಿಕೆ ಕೇವಲ ಕಲ್ಪನೆಯಾಗಿದ್ದು ಅದು ವಾಸ್ತವ ಅಲ್ಲ. ಇಂತಹ ಕಲ್ಪನಾ ಸಬ್ಸಿಡಿಗಳನ್ನು ಸರ್ಕಾರ ಕೋವಿಡ್-19 ಬರುವ ಮೊದಲೇ ನೀಡಿತ್ತು. ಈ ಕಷ್ಟದ ಪರಿಸ್ಥಿತಿಯಲ್ಲಿ ಪಿಎಂ ಕೇರ್ ಫಂಡ್ ನ್ನು ಬಳಸುವುದು ಉತ್ತಮವಲ್ಲವೇ ಎಂದು ಕೇಳಿದ್ದಾರೆ.