ರಾಜ್ಯ

ಬೆಂಗಳೂರು: ಸ್ನೇಹಿತರಿಂದ ಯುವಕನ ಕೊಲೆ

Srinivasamurthy VN

ಬೆಂಗಳೂರು: ಐದು ದಿನಗಳ ಹಿಂದಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿದ್ದ ಯುವಕನನ್ನು ಆತನ ಸ್ನೇಹಿತರೇ ಡ್ರಾಗರ್ ನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜಪೇಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಚಾಮರಾಜಪೇಟೆಯ ಕೆಂಪೇಗೌಡನಗರದ ಅರುಣ್(20)ಎಂದು ಕೊಲೆಯಾದವರನ್ನು ‌ಗುರುತಿಸಲಾಗಿದೆ. ಈ ಮೊದಲು ಅಶ್ವಥ್‍ಕಟ್ಟೆಯ ಬಂಡೆ ಗುಡಿಸಲು ಪ್ರದೇಶದಲ್ಲಿ ವಾಸವಾಗಿದ್ದ ಅರುಣ್ ತದನಂತರ ಕೆಂಪೇಗೌಡನಗರಕ್ಕೆ ಮನೆಯನ್ನು ಬದಲಾಯಿಸಿದ್ದ. ಕಳೆದ ಐದು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಈತ ಶುಕ್ರವಾರ ರಾತ್ರಿ 7.30ರ ಸುಮಾರಿನಲ್ಲಿ ಸ್ನೇಹಿತರನ್ನು ಮಾತನಾಡಿಸಲು ಬಂಡೆಗುಡಿಸಲು ಪ್ರದೇಶಕ್ಕೆ ಅರುಣ್ ತೆರಳಿದ್ದ.

ಈ ಸಂದರ್ಭದಲ್ಲಿ ಕ್ಷುಲ್ಲಕ ವಿಚಾರವಾಗಿ ಸ್ನೇಹಿತರ ನಡುವೆ ಜಗಳವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಸ್ನೇಹಿತರೆಲ್ಲ ಸೇರಿ ಡ್ರಾಗರ್ ನಿಂದ ಅರುಣ್ ದೇಹದ ಹಲವು ಕಡೆ ಮನಬಂದಂತೆ ಇರಿದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚಾಮರಾಜಪೇಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ. ಅರುಣ್ ಹುಡುಗರನ್ನು ಕಟ್ಟಿಕೊಂಡು ರೌಡಿ ಚಟುವಟಿಕೆ ನಡೆಸುತ್ತಿದ್ದ.

ಈತನ ವಿರುದ್ಧ ಚಾಮರಾಜಪೇಟೆ ಮತ್ತು ಕಾಮಾಕ್ಷಿಪಾಳ್ಯದಲ್ಲಿ ಸಣ್ಣಪುಟ್ಟ ಪ್ರಕರಣಗಳಿದ್ದು ಹಳೆ ದ್ವೇಷ ದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

SCROLL FOR NEXT