ರಾಜ್ಯ

ವಿಶ್ವ ವಿಖ್ಯಾತ ಹಂಪಿಯ ಸ್ಮಾರಕಕ್ಕೆ ಅಧಿಕಾರಿಗಳಿಂದಲೇ ಕುತ್ತು!

Srinivasamurthy VN

ಹಂಪಿ: ವಿಶ್ವ ವಿಖ್ಯಾತ ಹಂಪಿಯ ಸ್ಮಾರಕ ರಕ್ಷಣೆ ಮಾಡಬೇಕಾಗಿರುವ ಅಧಿಕಾರಿಗಳಿಂದಲೇ ಸ್ಮಾರಕಗಳಿಗೆ ಕುತ್ತು ಬರುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಹೌದು..ಕೊರೊನಾ ಲಾಕ್ ಡೌನ್ ಮದ್ಯೆಯೇ ಸದ್ದು ಗದ್ದಲವಿಲ್ಲದೆ ಕಾಮಗಾರಿ ಹೆಸರಲ್ಲಿ ಹಂಪಿ ಸ್ಮಾರಕಗಳನ್ನು ಹಾಳುಗೆಡವಲಾಗುತ್ತಿದೆ. ಗುತ್ತಿಗೆದಾರರೊಂದಿಗೆ ಕೈ ಜೋಡಿಸಿರುವ ಕೆಲ ಅಧಿಕಾರಿಗಳು ಅಕ್ರಮವಾಗಿ ಕಾಮಗಾರಿ ಮಾಡಿ ಹಣ ಉಳಿಸಲು ಮುಂದಾಗಿದ್ದಾರೆ. 

ಗುತ್ತಿಗೆದಾರ ಬೇಕಾ ಬಿಟ್ಟಿಯಾಗಿ ಕಾಮಗಾರಿ‌ ನಡೆಸುತಿದ್ದರೂ ಭಾರತೀಯ ಪುರಾತತ್ವ ಇಲಾಖೆ ಮಾತ್ರ  ಕಣ್ಣು ಮುಚ್ಚಿ ಕುಳಿತಿದೆ. ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಂಕೀರ್ಣದಲ್ಲಿ ಟ್ರಾಕ್ಟರ್ ನುಗ್ಗಿಸಿ ಕಾಮಗಾರಿ ನಡೆಸಲಾಗುತ್ತಿದೆ. ನಿಯಮದ ಪ್ರಕಾರ ಸ್ಮಾರಕಗಳ ಮದ್ಯೆ ಯಾವುದೇ  ಬಾರಿ ಯಂತ್ರೋಪಕರಣಗಳ ಬಳಕೆಮಾಡದಂತೆ ಕಾಮಗಾರಿ‌ ನಡೆಸಬೇಕು. ಬಾರಿ ಯಂತ್ರೋಪಕರಣಗಳನ್ನು ಬಳಕೆ ಮಾಡಿದರೆ ಸ್ಮಾರಕಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. 

ಇದೇ ನಿಯಮಗಳ ಅಡಿಯಲ್ಲೇ ಗುತ್ತಿಗೆದಾರನಿಗೆ ಕಾಮಗಾರಿಯನ್ನು ನೀಡಲಾಗಿರುತ್ತೆ. ಆದರೆ ಹಣ ಉಳಿಸುವ ಉದ್ದೇಶದಿಂದ ಗುತ್ತಿಗೆದಾರ ಟ್ರಾಕ್ಟರ್ ಮೂಲಕ ಕಾಮಗಾರಿ ನಡೆಸಲು‌ ಮುಂದಾಗಿ ಸಿಕ್ಕಿ ಬಿದ್ದಿದ್ದಾನೆ. 

ಛಾಯಾಗ್ರಹಣಕ್ಕೆ ಟ್ರೈಪಾಡ್ ಬಳಕೆ ಮಾಡಿದರೂ ಹಲವು ಕಾನೂನುಗಳನ್ನ ಮುಂದಿಟ್ಟು ಚಿತ್ರೀಕರಣಕ್ಕೆ ಅಡ್ಡಿಪಡಿಸುವ ಅಧಿಕಾರಿಗಳಿಗೆ ಅಪರೂಪದ ಸ್ಮಾರಕಗಳ ಒಳಗಡೆ ಟ್ರಾಕ್ಟರ್ ನುಗ್ಗಿರುವುದು ಕಣ್ಣಿಗೆ ಕಾಣುವುದಿಲ್ಲವೇ. ಚಿತ್ರೀಕರಣಕ್ಕೆ ಟ್ರೈಪಾಡ ಬಳಕೆ ಮಾಡಿದರೆ ಸ್ಮಾರಕಗಳು  ಹಾಳಾಗುತ್ತವೆ ಎಂದು ಸಬೂಬು ಹೇಳುತಿದ್ದ ಅಧಿಕಾರಿಗಳು ಈಗ ಏಕಾಏಕಿ ಟ್ರಾಕ್ಟರ್ ನುಗ್ಗಿಸಿ ಕಾಮಗಾರಿ ಮಾಡುತ್ತಿದ್ದರೂ ಮೌನಕ್ಕೆ ಶರಣಾಗಿರುವುದೇಕೆ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ಲಾಕ್ ಡೌನ್ ಮದ್ಯೆ ಕದ್ದು ಮುಚ್ಚಿ ಕಳ್ಳತನದಲ್ಲಿ ಟ್ರಾಕ್ಟರ್ ಮೂಲಕ ಕಾಮಗಾರಿ ನಡೆಸಿದ ದೃಶ್ಯಗಳು  ನಮ್ಮ ವರದಿಗಾರರಿಗೆ ಲಭ್ಯವಾಗಿದೆ.

SCROLL FOR NEXT