ರಾಜ್ಯ

ಲಾಕ್ ಡೌನ್: ಚಿಕ್ಕಬಳ್ಳಾಪುರದಲ್ಲಿ ವಿಷ ಸೇವಿಸಿ ಹೂವು ಬೆಳೆಗಾರ ಆತ್ಮಹತ್ಯೆ

Lingaraj Badiger

ಚಿಕ್ಕಬಳ್ಳಾಪುರ: ಜಮೀನಿನಲ್ಲಿ ಹೂವು ಬೆಳೆದಿದ್ದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಿಗುಪ್ಪೆ ಗ್ರಾಮದಲ್ಲಿ ನಡೆದಿದೆ.

55 ವರ್ಷದ ರೈತ ರಾಮಪ್ಪ ಶನಿವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಜಮೀನಿಗೆ ತೆರಳಿ ಮನೆಗೆ ವಾಪಾಸಾಗಿ ವಿಷ ಸೇವಿಸಿದ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಫಲಕಾರಿಯಾಗದೇ ಬೆಳಗ್ಗೆ 11.30ರ ಸುಮಾರಿಗೆ ರಾಮಪ್ಪ ಅವರು ಮೃತಪಟ್ಟಿದ್ದಾರೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಎರಡು ಎಕರೆಯಲ್ಲಿ ಬೆಳೆದ ಹೂವಿನ ಬೆಳೆ ಮಾರಾಟವಾಗದೇ, ಸಾಲದ ಬಾಧೆಯಿಂದ ರಾಮಪ್ಪ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿ ಮೃತರ ಪತ್ನಿ ನಾರಾಯಣಮ್ಮ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಮ್ಮ ಮೂರು ಎಕರೆ ಜಮೀನಿನ ಪೈಕಿ ರಾಮಪ್ಪ ಅವರು ಎರಡು ಎಕರೆಯಲ್ಲಿ 1 ಲಕ್ಷ ರೂ. ಖರ್ಚು ಮಾಡಿ ಹೂವು ಬೆಳೆದಿದ್ದರು. ಆದರೆ, ಲಾಕ್ ಡೌನ್ ಪರಿಣಾಮ ಹೂವು ‌ಮಾರಾಟವಾಗದ್ದರಿಂದ ಮನನೊಂದು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ನಾರಾಯಣಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

SCROLL FOR NEXT