ರಾಜ್ಯ

20 ಹಸು, ಮೇಕೆಗಳನ್ನು ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆ

Manjula VN

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯಲ್ಲಿ ಸುಮಾರು 20 ಹಸು ಹಾಗೂ ಮೇಕೆಗಳನ್ನು ಬಲಿ ಪಡೆದುಕೊಂಡಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.

ಮಂಗಳವಾರ ಬೆಳಿಗ್ಗೆಯಿಂದಲೇ ಅರಣ್ಯ ಸಿಬ್ಬಂದಿ ಹಾಗೂ ವೈದ್ಯರು ಆನೆಗಳ ಸಹಾಯದಿಂದ ಹುಲಿಯನ್ನು ಸೆರೆಹಿಡಿಯಲು ಹುಡುಕಾಟ ಆರಂಭಿಸಿದ್ದರು. 

ಇದರಂತೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅಕ್ರಂ ಎಂಬುವವರು ಹುಲಿಗೆ ಅರವಳಿಕೆ ಚುಚ್ಚುಮದ್ದು ಶೂಟ್ ಮಾಡುವಲ್ಲಿ ಯಶಸ್ವಿಯಾದರು. ಬಳಿಕ ಹುಲಿಯು ಕುಂದುಕೆರೆ ವಲಯದ ಪರಮೇಶ್ವರಪ್ಪ ಅವರ ಜಮೀನಿನ ಬಳಿ ಕೊನೆಗೂ ಸೆರೆಯಾಯಿತು. 

ಹುಲಿ ಆರೋಗ್ಯವಾಗಿದೆ. ಆದರೆ, ಕೋರೆಹಲ್ಲುಗಳಲ್ಲಿ ಕೆಲ ಗಾಯಗಳಾಗಿರುವುುದ ಕಂಡು ಬಂದಿದೆ. ಇದೀಗ ಚಿಕಿತ್ಸೆ ನೀಡಲಾಗುತ್ತಿದ್ದು, ಗುಣಮುಖವಾಗುತ್ತಿದ್ದಂತೆಯೇ ಕಾಡಿಗೆ ಬಿಡುಗಡೆ ಮಾಡಲಾಗುತ್ತದೆ. ಸೆರೆಹಿಡಿದ ಬಳಿಕ ಹುಲಿಗಳನ್ನು ಕಾಡಿಗೆ ಬಿಡುವ ಕೆಲವೇ ಪ್ರಕರಣಗಳಲ್ಲಿ ಇದೂ ಕೂಡ ಒಂದಾಗಿದೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರಾ ಅವರು ಹೇಳಿದ್ದಾರೆ. 

ಹುಲಿ ಸೆರೆಹಿಡಿಯಲು ಸಮಿತಿಯನ್ನು ರಚನೆ ಮಾಡಲಾಗಿತ್ತು. ಹುಲಿಯ ಎಲ್ಲಾ ಚಲನವಲನಗಳನ್ನು ಗಮನಿಸಿ, ಪರಿಶೀಲನೆ ನಡೆಸಿದ ಬಳಿಕವೇ ಸೆರೆ ಹಿಡಿಯಲಾಗಿದೆ. ಮೈಸೂರು ಮೃಗಾಲಯದಲ್ಲಿ ಹುಲಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬಹಳ ಹತ್ತಿರದಿಂದ ಎಲ್ಲವನ್ನೂ ಗಮನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

SCROLL FOR NEXT