ರಾಜ್ಯ

ಇನ್ನೆರಡು ದಿನಗಳಲ್ಲಿ ಖಾಸಗಿ ಬಸ್ ಸೇವೆ, ಶೇ.15 ರಷ್ಟು ದರ ಹೆಚ್ಚಿಸಿ ಬಸ್ ಓಡಿಸಲು ಅವಕಾಶ: ಸಚಿವ ಲಕ್ಷ್ಮಣ ಸವದಿ

Srinivasamurthy VN

ರಾಯಚೂರು: ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲಿ ಖಾಸಗಿ ಬಸ್ ಗಳ ಸೇವೆ ಆರಂಭವಾಗಲಿದ್ದು, ಶೇ.15ರಷ್ಟು ಮಾತ್ರ ದರ ಹೆಚ್ಚಿಸಿ ಬಸ್ ಓಡಿಸಲು ಅನುಮತಿ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಶುಕ್ರವಾರ ರಾಯಚೂರಿನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, 'ಎರಡು ದಿನಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ ಕೂಡಾ ಆರಂಭವಾಗಲಿವೆ. ಶೇ 15 ರಷ್ಟು ದರ ಏರಿಕೆಗೆ ಅವಕಾಶ ನೀಡಲಾಗಿದೆ. ಈ ಸಂಬಂಧ ಖಾಸಗಿ ವಾಹನಗಳ  ಮಾಲೀಕರ ಸಂಘದಿಗೆ ಸಭೆ ನಡೆದಿದ್ದು, ಅವರ ಶೇ 50ರಷ್ಟು ದರ ಏರಿಕೆ ಬೇಡಿಕೆ ತಿರಸ್ಕರಿಸಲಾಗಿದೆ. ಸೋಂಕು ತಡೆಯಲು ಸರ್ಕಾರಿ ಬಸ್‌ಗಳಲ್ಲಿ ಅನುಸರಿಸುವ ಎಲ್ಲಾ ನಿಯಮಗಳನ್ನು ಖಾಸಗಿ ಬಸ್‌ಗಳಲ್ಲಿಯೂ ಅನುಸರಿಸಬೇಕು. ಕೆಂಪು ವಲಯ ಹಾಗೂ ಬಫರ್ ಜೋನ್ ಪ್ರದೇಶಗಳ  ಪ್ರಯಾಣಿಕರನ್ನು ಕರೆದೊಯ್ಯದಂತೆ ತಿಳಿಸಲಾಗಿದೆ' ಎಂದು ಹೇಳಿದರು.

ಅಂತೆಯೇ 'ಸೇವಾ ಮನೋಭಾವ ಇಟ್ಟುಕೊಂಡು ನಷ್ಟವಾದರೂ ಸರ್ಕಾರಿ ಬಸ್ ಸಂಚಾರ ಆರಂಭಿಸಿದ್ದೇವೆ. ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿಗೆ ಅವಕಾಶ ನೀಡುವುದಿಲ್ಲ. ಖಾಸಗಿಯವರ ಟ್ಯಾಕ್ಸ್ ಮನ್ನಾ ಮಾಡಲಾಗಿದೆ. ಖಾಸಗಿ ವಾಹನಗಳಲ್ಲಿ ಓಡಾಡುವ ಪ್ರಯಾಣಿಕರ ಮಾಹಿತಿ  ನೀಡಬೇಕೆಂದು ಸೂಚಿಸಲಾಗಿದೆ. ಸರ್ಕಾರಿ ಸಾರಿಗೆ ಬಸ್ ಗಳಿಗೆ ಅನ್ವಯವಾಗಿರುವ ಎಲ್ಲಾ ನಿಯಮಗಳನ್ನ ಅವರು ಪಾಲಿಸಬೇಕು. ರಾಜ್ಯಸರ್ಕಾರ ಎಲ್ಲರಿಗೂ ಸಾರಿಗೆ ಸೌಲಭ್ಯ ಕೊಡಲು ತೀರ್ಮಾನಿಸಿದೆ. ನಮ್ಮ ರಾಜ್ಯದವರನ್ನು ಹೊರಗಡೆಯಿಂದ ಕರೆತರುತ್ತಿದ್ದೇವೆ. ಇಲ್ಲಿದ್ದವರನ್ನು  ಕಳುಹಿಸುತ್ತಿದ್ದೇವೆ. ವಲಸೆ ಕಾರ್ಮಿಕರಿಂದ ರಾಯಚೂರಿಗೆ ಸಮಸ್ಯೆ ಬಂದಿದೆ. ಇನ್ನೂ ಎಷ್ಟು ದಿನ ಕೊರೋನಾ ಮುಂದೆ ಹೋಗುತ್ತದೆ ಅನ್ನೋ ಅಂದಾಜಿಲ್ಲ. ಈಗಲೇ 10 ದಿನದಲ್ಲಿ ಮುಗಿಯುತ್ತೇ ಅನ್ನೋ ಭ್ರಮೆ ಕೂಡ ಬೇಡ. ಸಾಮಾಜಿಕ ಅಂತರವನ್ನು ಸಾರ್ವಜನಿಕರು ಕಾಪಾಡಬೇಕು.  ಬೈಕ್ ನಲ್ಲಿ ಒಬ್ಬರೇ ಹೋಗುವಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಬೇಕು ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇನ್ನು ಮಹಾರಾಷ್ಟ್ರ ಮತ್ತು ಗುಜರಾತ್ ನಿಂದ ನಮಗೆ ಸಮಸ್ಯೆಯಾಗುತ್ತಿದೆ. ಮಹಾರಾಷ್ಟ್ರದಲ್ಲೂ ಮೂರು ಜಿಲ್ಲೆಯಲ್ಲಿ ಕೊರೊನಾ ಇಲ್ಲಾ ಹಾಗಾಗಿ ಭಯಬೇಡ. ಅಲ್ಲಿನ ಸೋಂಕಿತ ಜಿಲ್ಲೆಗಳಿಗೆ ಧಾರಾವಾಡ, ಬೆಳಗಾಂ, ವಿಜಯಪುರದಿಂದ ಹೆಚ್ಚು ಜನ ಹೋಗಿದ್ದಾರೆ. 16 ರಿಂದ 18 ಸಾವಿರ  ಜನರನ್ನು ರಾಜ್ಯಕ್ಕೆ ಕರೆತಂದಿದ್ದೇವೆ. ಗುಜರಾತ್, ಮಹಾರಾಷ್ಟ್ರದ ಕೆಲವು ಪಟ್ಟಣಗಳಲ್ಲಿ ಕೊರೋನಾ ಸೋಂಕು ಹೆಚ್ಚಿದೆ. ಅಲ್ಲಿಂದ ಬಂದ ನಮ್ಮ ಜನರಿಂದ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.

SCROLL FOR NEXT