ರಾಜ್ಯ

ಮೂಢನಂಬಿಕೆಗಳೊಂದಿಗೆ ಕಳಂಕ ಹೊತ್ತಿದ್ದ ಚಾಮರಾಜನಗರ ಜಿಲ್ಲೆ ಈಗ ಇಡೀ ರಾಜ್ಯಕ್ಕೆ ಮಾದರಿ!

Manjula VN

ಮೈಸೂರು: ಕಾಕತಾಳಿಯವೋ, ನಿಜಕ್ಕೂ ಶಾಪವೋ ಅಥವಾ ರಾಜಕೀಯ ಸ್ಥಿತ್ಯಂತರಗಳೊ ಮೂಢನಂಬಿಕೆಗಳೊಂದಿಗೆ ಕಳಂಕ ಹೊತ್ತಿದ್ದ ಚಾಮರಾಜನಗರ ಜಿಲ್ಲೆ ಇದೀಗ ಕೊರೋನಾ ನಿಗ್ರಹಿಸುವಲ್ಲಿ ಇಡೀ ರಾಜ್ಯಕ್ಕೇ ಮಾದರಿಯಾಗಿ ನಿಂತಿದೆ. 

ಕೊರೋನಾ ಸೋಂಕಿನಿಂದ ಇಡೀ ರಾಜ್ಯ ಕಂಗಾಲಾಗಿರುವ ನಡುವಲ್ಲೇ ವೈರಸ್ ನಿಗ್ರಹಿಸುವಲ್ಲಿ ಚಾಮರಾಜನಗರ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲೀಗ ಒಂದು ಸೋಂಕು ಪ್ರಕರಗಳು ಕಂಡು ಬಂದಿಲ್ಲ. 

ಚಾಮರಾಜನಗರ ಜಿಲ್ಲೆಯಲ್ಲಿ ಮುಂಬೈ ಅಥವಾ ಮಹಾರಾಷ್ಟ್ರ ರಾಜ್ಯಗಳಿಂದ ಬರುವ ಜನರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿಲ್ಲ. ಜಿಲ್ಲೆಯಲ್ಲಿರು ಬಹುತೇಕ ಮಂದಿ ಕೂಡ ಉದ್ಯೋಗ ಅರಸಿ ಇತರೆ ರಾಜ್ಯ ಅಥವಾ ನಗರಗಳಿಗೆ ಹೋಗಿಲ್ಲ. ಇನ್ನು ತಮಿಳುನಾಡಿನಿಂದ ರಾಜ್ಯಕ್ಕೆ ಆಗಮಿಸಲು ಹಲವು ಜನರು ಆನ್'ಲೈನ್ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಜಿಲ್ಲಾಡಳಿತವಾಗಲೀ, ಪೊಲೀಸ್ ಇಲಾಖೆಯಾಗಲೀ ಅವರಿಗಿನ್ನೂ ಅನುಮತಿ ನೀಡಿಲ್ಲ. ಇಂತಹ ಮುನ್ನಚೆರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಚಾಮರಾಜನಗರ ಕೊರೋನಾ ನಿಗ್ರಹಿಸುವಲ್ಲಿ ಯಶಸ್ವಿ ಮಾರ್ಗದತ್ತ ಚಲಿಸುತ್ತಿದೆ. 

ಇತರೆ ರಾಜ್ಯಗಳಿಂದ ಜನರು ಗಡಿ ನುಸುಳದಂತೆ ಅಲ್ಲಿರುವ ಯುವಕರೇ ಸ್ವಯಂ ಪ್ರೇರಿತರಾಗಿ ಇದೀಗ ಗಡಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಇನ್ನು ವಲಸೆ ಕಾರ್ಮಿಕರ ಮೇಲೆ ಕಣ್ಗಾವಲಿರಿಸುವ ಅಧಿಕಾರಿಗಳು ಅವರನ್ನು ಕಂಡಕೂಡಲೇ ಕ್ವಾರಂಟೈನ್ ನಲ್ಲಿರಿಸುವ ಕೆಲಸ ಮಾಡುತ್ತಿದ್ದಾರೆ. 

ಈ ನಡುವೆ ಅಂತರ್ ರಾಜ್ಯ ವಾಹನಗಳು ಹಾಗೂ ಜನರನ್ನು ಗಡಿಯೊಳಗೆ ಬಿಡುತ್ತಿರುವ ಅಧಿಕಾರಿಗಳನ್ನೂ ಅಧಿಕಾರದಿಂದ ಅಮಾನತು ಮಾಡುವ ಕೆಲಸಗಳೂ ಕೂಡ ಜಿಲ್ಲೆಯಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಪೊಲೀಸ್ ಅಧಿಕಾರಿ ರವಿ ಹಾಗೂ ಕಂದಾಯ ಅಧಿಕಾರಿಯೊಬ್ಬರನ್ನು ಇತ್ತೀಚೆಗಷ್ಟೇ ಅಮಾನತು ಮಾಡಲಾಗಿತ್ತು. 

ವೈದ್ಯರು ಮತ್ತು ಅರೆಕಾಲಿಕ ವೈದ್ಯರು ಈಗಾಗಲೇ 2,341 ಸ್ವ್ಯಾಬ್‌ಗಳನ್ನು ಸಂಗ್ರಹಿಸಿದ್ದು,  ಕೋವಿಡ್ ಶಂಕಿತ ಪ್ರಕರಣಗಳನ್ನು ಗುರುತಿಸಲು ಮನೆ ಮನೆಗೆ ತೆರಳಿ ಆರೋಗ್ಯ ಪರೀಕ್ಷೆಗಳನ್ನು ನಡೆಸಲು ಆಶಾ ಕಾರ್ಮಿಕರನ್ನು ನಿಯೋಜನೆಗೊಳಿಸಿದ್ದಾರೆ. 

ಪರಿಶೀಲನೆ ವೇಲೆ ಯಾವುದೇ ಪ್ರದೇಶ ಅಥವಾ ಮನೆಯಲ್ಲಿರುವ ಜನರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿದ್ದೇ ಆದರೆ, ಸ್ಥಳಕ್ಕೇ ತೆರಳಿ ವೈದ್ಯರು ವೈದ್ಯಕೀಯ ಚಿಕಿತ್ಸೆ ನೀಡುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದ್ದ ಎಲ್ಲರ ವೈದ್ಯಕೀಯ ವರದಿಗಳೂ ನೆಗೆಟಿವ್ ಬಂದಿದ್ದು, 132 ಮಂದಿಯನ್ನು ಕ್ವಾರಂಟೈನ್'ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಂ.ಸಿ.ರವಿ ಮಾಹಿತಿ ನೀಡಿದ್ದಾರೆ. 

SCROLL FOR NEXT