ರಾಜ್ಯ

ಭ್ರಷ್ಟರ ರಕ್ಷಣೆ ದುರುದ್ದೇಶವಿಲ್ಲ: ವಿಧಾನ ಸಭೆ ಸಚಿವಾಲಯ ಕಾರ್ಯದರ್ಶಿಗಳ ಸ್ಪಷ್ಟನೆ

Sumana Upadhyaya

ಬೆಂಗಳೂರು: ರಾಜ್ಯ ವಿಧಾನ ಮಂಡಲ, ವಿಧಾನ ಸಭೆಯ ಸಮಿತಿಗಳ ಸ್ಥಳೀಯ ಭೇಟಿ ಅಥವಾ ಸ್ಥಳ ಪರಿಶೀಲನೆ ನಡೆಸಲು ಅವಕಾಶ ನೀಡದೆ ಸಮಿತಿಯ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುವ ಮೂಲಕ ಭ್ರಷ್ಟಾಚಾರ ಎಸಗುವವರಿಗೆ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷರು ರಕ್ಷಣೆ ನೀಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ, ವರದಿ, ಸಂಪಾದಕೀಯಗಳನ್ನು ಪ್ರಕಟಿಸುವ ಮೂಲಕ ಹಗುರವಾಗಿ ಬಿಂಬಿಸಲಾಗಿದೆ ಎಂಬುದನ್ನು ಗಮನಿಸಲಾಗಿದೆ. ಈ ಸಂಬಂಧ ಕರ್ನಾಟಕ ವಿಧಾನ ಸಭೆ ಸಚಿವಾಲಯ ಕಾರ್ಯದರ್ಶಿಗಳು ಸ್ವಷ್ಟೀಕರಣವನ್ನು ನೀಡಿದ್ದಾರೆ.

ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಾಣುವಿನ ಪರಿಣಾಮವನ್ನು ಗಮನಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಸಂಬಂಧ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಹೊರಡಿಸಲಾದ ಮಾರ್ಗಸೂಚಿಗಳನ್ನು ಪರಿಗಣಿಸಿ ಲಾಕ್‍ಡೌನ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ವಿಧಾನ ಮಂಡಲ ಹಾಗೂ ವಿಧಾನ ಸಭೆಯ ಸಮಿತಿಗಳು ಸಭೆಗಳನ್ನು ನಡೆಸುವುದನ್ನು ಸ್ಥಗಿತಗೊಳಿಸಲಾಗಿತ್ತು.

ನಂತರ ಹಂತ ಹಂತವಾಗಿ ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಮೇ 18 ರ ನಂತರ ಸಮಿತಿ ಸಭೆಗಳನ್ನು ನಡೆಸಲು ಮಾತ್ರ ಅವಕಾಶ ಕಲ್ಪಿಸಲಾಯಿತು.

ಸಮಿತಿ ಸಭೆಗಳನ್ನು ನಡೆಸುವಾಗ ಆದಷ್ಟು ಕೊರೋನಾ ವೈರಾಣುವನ್ನು (ಕೋವಿಡ್ -19) ಹತೋಟಿಗೆ ತರಲು ತೊಡಗಿಸಿಕೊಂಡಿರುವ ಇಲಾಖೆಗಳನ್ನು ಹೊರತುಪಡಿಸಿ ಸಮಿತಿ ಸಭೆಗಳನ್ನು ನಡೆಸಲು ಸೂಚನೆಗಳನ್ನು ನೀಡಲಾಗಿತ್ತು.
ಸಮಿತಿಗಳು ಅಧ್ಯಯನ ಪ್ರವಾಸ/ಸ್ಥಳ ಪರಿಶೀಲನೆ ಕೈಗೊಂಡಾಗ ಸಮಿತಿಯ ಸದಸ್ಯರು, ಇಲಾಖಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಮುಕ್ತವಾಗಿ ಭೇಟಿ ಮಾಡುವ ಸಂದರ್ಭ ಉಂಟಾಗುವುದರಿಂದ ಕೊರೋನ (ಕೋವಿಡ್ -19) ವೈರಾಣು ಹರಡುವಿಕೆಯ ಗಂಭೀರತೆಯನ್ನು ಪರಿಗಣಿಸಿ ಆರೋಗ್ಯದ ಹಿತದೃಷ್ಟಿಯಿಂದ ಸಮಿತಿಗಳು ರಾಜ್ಯದೊಳಗೆ ಅಥವಾ ಹೊರರಾಜ್ಯಗಳಲ್ಲಿ ಯಾವುದೇ ಅಧ್ಯಯನ ಪ್ರವಾಸವನ್ನು ಹಾಗೂ ಸ್ಥಳೀಯವಾಗಿ ಯಾವುದೇ ಭೇಟಿ ಅಥವಾ ಸ್ಥಳ ಪರಿಶೀಲನೆಗಳನ್ನು ಮುಂದಿನ ಆದೇಶದವರೆಗೆ ಕೈಗೊಳ್ಳಬಾರದೆಂದು ಸೂಚಿಸಲಾಗಿತ್ತು.

ಮೇಲ್ಕಂಡ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾಗಿದೆಯೇ ಹೊರತು ಅದರಲ್ಲಿ ಯಾವುದೇ ದುರುದ್ದೇಶ ಇಲ್ಲವೆಂದು ಸ್ಪಷ್ಟೀಕರಣ ನೀಡಲಾಗಿದೆ.

SCROLL FOR NEXT