ರಾಜ್ಯ

ಗ್ರಾಮಸಭೆ ಮೂಲಕ ತಿದ್ದುಪಡಿ ಮಸೂದೆಗಳ ಕುರಿತು ರೈತರಿಗೆ ಅರಿವು: ಈರಣ್ಣ ಕಡಾಡಿ

Shilpa D

ಬಾಗಲಕೋಟೆ/ವಿಜಯಪುರ: ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಸಹಿತ ವಿವಿಧ ಕಾನೂನು ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಯಗಳ ಹೆಸರಿನಲ್ಲಿ ನಡೆದ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಪ್ರತಿಭಟನೆ ನಡೆಸಿದವರು ನಿಜವಾದ ರೈತ ಸಂಘಟನೆಯವರಲ್ಲ. ಹೀಗಾಗಿ ಬಿಜೆಪಿ ರೈತ ಮೋರ್ಚಾದಿಂದ ರಾಜ್ಯಾದ್ಯಂತ ರೈತ ಜಾಗೃತಿ ಅಭಿಯಾನ ಆರಂಭಿಸಿದ್ದು, ಗ್ರಾಮಸಭೆ ಮೂಲಕ ತಿದ್ದುಪಡಿ ಮಸೂದೆಗಳ ಕುರಿತು ರೈತರಿಗೆ ಅರಿವು ಮೂಡಿಸಲಾಗುವುದು ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ  ಮಾತನಾಡಿದ ಅವರು, ವಿರೋಧ ಪಕ್ಷಗಳು ರೈತರನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿವೆ ಎಂದು ಆರೋಪಿಸಿದರು. ಕೃಷಿ ಕ್ಷೇತ್ರದ ಸುಧಾರಣೆಯ ದಿಸೆಯಲ್ಲಿ ಕೇಂದ್ರ ಸರ್ಕಾರ ಅಂಗೀಕಾರ ಪಡೆದ ಮೂರು ಮಸೂದೆಗಳಿಂದ ರೈತರಿಗೆ ಸಿಗುವ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಲ್ಲುವುದಿಲ್ಲ. ಎಪಿಎಂಸಿಗಳನ್ನು ಮುಚ್ಚುವುದಿಲ್ಲ, ಇವುಗಳ ಜೊತೆಗೆ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಕೂಡ ರೈತರ ಉತ್ಪನ್ನಗಳನ್ನು ಖರೀದಿಸುತ್ತವೆ. ಈ ಎರಡೂ ವ್ಯವಸ್ಥೆ ಒಟ್ಟಿಗೆ ಕಾರ್ಯ ನಿರ್ವಹಿಸುವ ಕಾರಣ ರೈತರಿಗೆ ಉತ್ತಮ ಬೆಲೆ ಸಿಗಲಿದೆ ಎಂದರು.

ದೇಶದಲ್ಲಿ 10 ಸಾವಿರ ವಿಶೇಷ ಕೃಷಿ ಉತ್ಪನ್ನ ವಲಯಗಳನ್ನು ನಿರ್ಮಾಣ ಮಾಡಲಾಗುವುದು. ಆ ಮೂಲಕ ಚಿಕ್ಕ ಹಿಡುವಳಿದಾರರಿಗೂ ಕೂಡ ಸಮಾನ ಅವಕಾಶ ಸಿಗಲಿದೆ. ಇದರ ಜೊತೆಗೆ ಕಂಪನಿಗಳು ರೈತರ ಉತ್ಪನ್ನಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಾರೆಯೇ ಹೊರತು ಅವರ ಭೂಮಿಯೊಂದಿಗೆ ಅಲ್ಲ ಎಂದರು. 

ಅಗತ್ಯ ಸರಕುಗಳ ಕಾಯ್ದೆಯಿಂದಾಗಿ ದೇಶದಲ್ಲಿ ಲೈಸನ್ಸ್‌ ರಾಜ್‌ ಪದ್ಧತಿ ಜಾರಿಯಲ್ಲಿತ್ತು. ದವಸ–ಧಾನ್ಯಗಳ ಸಂಗ್ರಹ, ದಾಸ್ತಾನು ಹಾಗೂ ಸಂಸ್ಕರಣೆ ಮೇಲೆ ನಿಯಂತ್ರಣ ಇತ್ತು. ಇದರಿಂದಾಗಿ ಎಪಿಎಂಸಿಯಲ್ಲಿ ಕಡಿಮೆ ಬೆಲೆಗೆ ರೈತರು ಉತ್ಪನ್ನ ಮಾರಾಟ ಮಾಡಬೇಕಿತ್ತು. ಆದರೆ, ನೂತನ ಕಾಯ್ದೆಯಿಂದ ರೈತರು ಯಾವಾಗ ಬೇಕಾದರೂ ತಮಗೆ ಲಾಭ ಸಿಗುವ ದರಕ್ಕೆ ಉತ್ಪನ್ನ ಮಾರಾಟ ಮಾಡಬಹುದು ಎಂದು ಹೇಳಿದರು. 

SCROLL FOR NEXT