ರಾಜ್ಯ

ಕರ್ನಾಟಕ ಉಪ ಚುನಾವಣೆ: ಕೊರೋನಾ ಸೋಂಕಿತರಿಗೂ ಮತದಾನದ ಅವಕಾಶ, ಅಂಚೆ ಮತದ ಮೂಲಕ ಹಕ್ಕು ಚಲಾವಣೆಗೆ ಸಿದ್ಧತೆ!

Srinivasamurthy VN

ಬೆಂಗಳೂರು: ಕರ್ನಾಟಕ ಉಪ ಚುನಾವಣೆಯಲ್ಲಿ ಕೊರೋನಾ ಸೋಂಕಿತರಿಗೂ ಮತದಾನದ ಅವಕಾಶ ನೀಡಿರುವ ರಾಜ್ಯ ಚುನಾವಣಾ ಆಯೋಗ ಈ ಸಂಬಂಧ ಸೋಂಕಿತ ಮತದಾರರಿಗಾಗಿ ಅಂಚೆ ಮತದ ಮೂಲಕ ಹಕ್ಕು ಚಲಾವಣೆಗೆ ಸಿದ್ಧತೆ ನಡೆಸಿದೆ.

ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಉಪ ಚುನಾವಣೆ ಕಣ ರಂಗೇರಿರುವಂತೆಯೇ ಇತ್ತ ರಾಜ್ಯ ಚುನಾವಣಾ ಆಯೋಗ ಚುನಾವಣೆ ಸಂಬಂಧ ಹಲವು ಆದೇಶಗಳನ್ನು ಜಾರಿಗೆ ತಂದಿದೆ. ಮುಂಬರುವ ನವೆಂಬರ್ 11ರಂದು ನಡೆಯಲಿರುವ ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ  ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಅಂಗವಿಕಲರು, 80 ವರ್ಷ ವಯಸ್ಸು ಮೀರಿದವರು ಮತ್ತು ಕೋವಿಡ್‌ ಪಾಸಿಟಿವ್‌‌ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಇವರು ಫಾರಂ 12 ಡಿ ಮೂಲಕ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು  ಅರ್ಜಿ ಸಲ್ಲಿಸಬೇಕು. ಚುನಾವಣಾ ಅಧಿಕಾರಿಗಳು ಇವರು ಇರುವಲ್ಲಿಗೆ ಹೋಗಿ ಅರ್ಜಿ ಸ್ವೀಕರಿಸಿ ಅಂಚೆ ಮತದಾನಕ್ಕೆ ಅರ್ಹರೇ ಎಂದು ಪರಿಶೀಲನೆ ನಡೆಸಲಿದ್ದಾರೆ.

ನಿಗದಿತ ಮತದಾನದ ವೇಳೆಗೆ ರಿಟರ್ನಿಂಗ್ ಅಧಿಕಾರಿ ಅಂಚೆ ಮತಪತ್ರಗಳನ್ನು ತಲುಪಿಸಿ ಮತ್ತು ಕ್ಷೇತ್ರದಲ್ಲಿ ಮತದಾನಕ್ಕೆ ನಿಗದಿಪಡಿಸಿದ ದಿನಾಂಕದ ಮೊದಲು ಅದನ್ನು ಮತದಾರರಿಂದ ಸಂಗ್ರಹಿಸಲು ವ್ಯವಸ್ಥೆ ಮಾಡಬೇಕಾಗುತ್ತದೆ. ಸೋಂಕಿತ ಅಥವಾ ವೃದ್ಧ ಮತದಾರರಿಂದ ಅಂಚೆ ಮತ ಪತ್ರದ ಅರ್ಜಿಯೊಂದಿಗೆ  ಪ್ರಮಾಣ ಪತ್ರದ ಪ್ರತಿ ಅಥವಾ ಸಮರ್ಥ ಆರೋಗ್ಯ ಅಧಿಕಾರಿಗಳ ಸೂಚನೆಯೊಂದಿಗೆ ಅರ್ಜಿದಾರರು ರಾಜ್ಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಥವಾ COVID-19 ಕಾರಣದಿಂದಾಗಿ ರಾಜ್ಯದೊಳಗೆ ಸಂಪರ್ಕ ತಡೆ ಅಥವಾ ಕ್ವಾರಂಟೈನ್ ನಿಲ್ಲಿರುತ್ತಾರೆ ಎಂಬುದನ್ನು ಪ್ರಮಾಣಪತ್ರದ ಮೂಲಕ  ತೋರಿಸಬೇಕಿದೆ.ಅಂತೆಯೇ ಮತದಾರರ ಭೇಟಿ ದಿನಾಂಕ ಮತ್ತು ಅಂದಾಜು ಸಮಯದ ಬಗ್ಗೆ ಅಧಿಕಾರಿಗಳಿಗೆ ಮುಂಚಿತವಾಗಿ ತಿಳಿಸಬೇಕಿದೆ. ಫಾರಂ 12 ಡಿ ಮೂಲಕ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬೇಕು. ಚುನಾವಣಾ ಅಧಿಕಾರಿಗಳು ಇವರು ಇರುವಲ್ಲಿಗೆ ಹೋಗಿ  ಅರ್ಜಿ ಸ್ವೀಕರಿಸಿ ಅಂಚೆ ಮತದಾನಕ್ಕೆ ಅರ್ಹರೇ ಎಂದು ಪರಿಶೀಲನೆ ನಡೆಸಲಿದ್ದಾರೆ. 

ಸುರಕ್ಷಿತ ಮತದಾನದ ದೃಷ್ಟಿಯಿಂದ, ಚುನಾವಣಾ ಆಯೋಗವು ಮತ ಚಲಾಯಿಸಲು ಬರುವ ಮತದಾರರಿಗೆ ಮಾಸ್ಕ್ ಗಳು, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮತ್ತು ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಿದೆ. ಮತದಾರರು ಮಾತ್ರವಲ್ಲದೇ ಮತಗಟ್ಟೆಗಳಲ್ಲಿನ ಚುನಾವಣಾ ಆಧಿಕಾರಿಗಳೂ ಕೂಡ  ಮಾಸ್ಕ್ ಗಳು ಮತ್ತು ಕೈ ಗವಸುಗಳನ್ನು ಹಾಕಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.
 

SCROLL FOR NEXT