ರಾಜ್ಯ

ಜಂಬೂ ಸವಾರಿಯನ್ನ ಮಾವುತರೇ ಮಾಡುತ್ತಾರೆ, ದಸರಾ ಉದ್ಘಾಟನೆಗೆ 200 ಜನರೇಕೆ: ಸಾಹಿತಿ ಎಸ್.ಎಲ್. ಭೈರಪ್ಪ ಪ್ರಶ್ನೆ

Raghavendra Adiga

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯನ್ನು ಮಾವುತರೇ ಮಾಡುತ್ತಾರೆ ಅದಕ್ಕೆ ಜನರೇಕೆ ಬೇಕು? ಇನ್ನು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಸಹ 200 ಜನರೇಕೆ ಬೇಕು? ಹೀಗೆಂದು ಖ್ಯಾತ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪಪ್ರಶ್ನೆ ಮಾಡಿದ್ದಾರೆ.

ಕೊರೋನಾ ಹೆಮ್ಮಾರಿ ದಿನೇ ದಿನೇ ಹೆಚ್ಚುತ್ತಿರುವ ಈ ಸಮಯದಲ್ಲಿ ದಸರಾ ಉದ್ಘಾಟನೆಗೆಂದು 200 ಜನರನ್ನು ಒಂದೆಡೆ ಸೇರಿಸುವುದು ಸರಿಯಲ್ಲ ಎಂದು ಭೈರಪ್ಪ ಅಭಿಪ್ರಾಯಪಟ್ಟರು.

ಕಡಲ ತೀರದ ಭಾರ್ಗವ ಡಾ. ಕೋಟ ಶಿವರಾಮ ಕಾರಂತರ ಜನ್ಮದಿನವಾದ ಇಂದು ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತ್ರಿ ಸ್ವೀಕರಿಸಿ ಅವರು ಮಾತನಡುತ್ತಿದ್ದರು.

ಜನರು ಅವರ ಮನೆಗಳಲ್ಲೇ ಈ ಬಾರಿ ದಸರಾ ಆಚರಿಸಿಕೊಳ್ಳಲಿ, ಚಾಮುಂಡಿ ತಾಯಿಗೆ ಬೆಟ್ಟದಲ್ಲೇ ಪೂಜೆ ನಡೆಯಲಿ. ಇದಕ್ಕೇಕೆ  200 ಮಂದಿ ಭಾಗಿಯಾಗಬೇಕು? ಇಷ್ಟು ಜನರೆಲ್ಲಾ ಸೇರಿದಾಗ ಕೊರೋನಾ ಮತ್ತೆ ಹೆಚ್ಚಾದರೆ ಅದಕ್ಕೆ ಹೊಣೆ ಯಾರು? ಸಾಹಿತಿ ಭೈರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಮಾವುತರು ಜಂಬೂ ಸವಾರಿ ನಡೆಸುತ್ತಾರೆ, ಅದಕ್ಕೆ ಜನರು ಬೇಕಾಗುವುದಿಲ್ಲ. ವ್ಯಾಪಾರ, ವ್ಯವಹಾರ ಎಂದು ಜನ ಸೇರಿದ್ದಾದರೆ ಕೊರೋನಾ ಹೆಚ್ಚುತ್ತದಲ್ಲವೆ ಎಂದು ಅವರು ಕೇಳಿದ್ದಾರೆ. ಅಲ್ಲದೆ ಈ ಬಾರಿ ವ್ಯ್ಪಾರದ ದೃಷ್ಟಿಕೋನ ಬಿಟ್ಟು ಜನರ ಆರೋಗ್ಯದ ಕಡೆ ಗಮನ ನೀಡಿ ಎಂದು ಅವರು ಸಲಹೆ ನೀಡಿದ್ದಾರೆ.

ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ

ಸಾಹಿತಿ ಭೈರಪ್ಪ ಅವರಿಗೆ ಈ ಸಾಲಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಮೈಸೂರಿನ ಪ್ರಮತಿ ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ  ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೈರಪ್ಪ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಈ ವೇಳೆ ಮಾತನಾಡಿದ ಸಚಿವರು "ಆಧುನಿಕ ಕಾಲಘಟ್ಟದಲ್ಲಿ ಕಾರಂತರಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಕನ್ನಡದ ಇನ್ನೊಬ್ಬ ಸಾಹಿತಿ ಭೈರಪ್ಪ ಕಾರಂತರಂತೆಯೇ ಭೈರಪ್ಪ ಅವರಿಗೂ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕೆನ್ನುವುದು ನಮ್ಮ ಆಶಯ ಎಂದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರು-ಕೊಡಗು ಸಂಸದ   ಪ್ರತಾಪ್ ಸಿಂಹ, ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ಅಧ್ಯಕ್ಷ ಎಚ್.ವಿ. ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT