ಹುಬ್ಬಳ್ಳಿ: ಆಧುನಿಕ ಯುಗದಲ್ಲಿ ಪ್ರಮುಖ ಮಾಧ್ಯಮವಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿಗಳ ಹಾವಳಿ ಹೆಚ್ಚಾಗಿ ಹೋಗಿದೆ. ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ತಿಳಿಯದ ಜನರು ಗೊಂದಲಕ್ಕೆ ಸಿಲುಕುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡು ಹಿಡಿದಿರುವ ಧಾರವಾರದ ಐಐಟಿ ವಿದ್ಯಾರ್ಥಿಯೊಬ್ಬ ನಕಲಿ ಸುದ್ದಿಗಳನ್ನು ಗುರ್ತಿಸಲೆಂದೇ ಆ್ಯಪ್'ವೊಂದನ್ನು ಅಭಿವೃದ್ಧಿಪಡಿಸಿದ್ದಾನೆ.
ಆ್ಯಪ್'ನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡ ಬಳಿಕ ಬಳಕೆದಾರರು ಯಾವುದೇ ಸುದ್ದಿಯನ್ನು ಈ ಆ್ಯಪ್ ನಲ್ಲಿ ಅಪ್ಲೋಡ್ ಮಾಡಿದರೆ ಆ ಸುದ್ದಿ ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಆ್ಯಪ್ ತೋರಿಸಲಿದೆ. ಸುದ್ದಿ ನಕಲಿಯಾಗಿದ್ದೇ ಆದರೆ, ಆ ಬಗ್ಗೆ ನಿಜವಾದ ಸುದ್ದಿ ಯಾವುದು ಎಂಬ ಮಾಹಿತಿಯನ್ನೂ ಈ ಆ್ಯಪ್ ನೀಡಲಿದೆ.
ನಕಲಿ ಸುದ್ದಿಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಐಐಟಿ ಧಾರವಾದ ವಿದ್ಯಾರ್ಥಿ ಅಮನ್ ಸಿಂಘಾಲ್ ಹಾಗೂ ಇವರ ಸ್ನೇಹಿತರು ಈ ಕುರಿತು ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದರು. ಇದರಂತೆ ಇದೀಗ ಆ್ಯಪ್ ನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ್ದಾರೆ.
ಆ್ಯಪ್ ಕುರಿತಂತೆ ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೊಖ್ರಿಯಾಲ್ ನಿಸಾಂಕ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಆ್ಯಪ್ ಎನ್ನೆರಡು ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿದುಬಂದಿದೆ.
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ 2020ರ ಮಾರ್ಚ್ ನಿಂದಲೂ ವಿದ್ಯಾರ್ಥಿಗಳು ಕಾಲೇಜಿನಿಂದ ದೂರ ಉಳಿದಿದ್ದಾರೆ. ಈ ನಡುವೆ ನಮ್ಮ ವಿದ್ಯಾರ್ಥಿಗಳು ಇಂತಹದ್ದೊಂದು ಆ್ಯಪ್ ಅಭಿವೃದ್ಧಿಪಡಿಸಿರುವುದು ಹೃದಯ ಮುಟ್ಟಿದೆ. ಇಂತಹ ಕಾರ್ಯ ಮಾಡಿರುವ ವಿದ್ಯಾರ್ಥಿಗಳ ತಂಡಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇವೆ. ಇಂತಹ ಸಂಶೋಧನೆ ಹಾಗೂ ಅಭಿವೃದ್ಧಿ, ಆವಿಷ್ಕಾರದ ಯತ್ನಗಳಿಗೆ ಬೆಂಬಲ ನೀಡುತ್ತೇವೆಂದು ಧಾರವಾಡದ ಐಐಟಿ ತಿಳಿಸಿದೆ.