ರಾಜ್ಯ

ಗದಗ: ಮಳೆಯಿಂದಾಗಿ 'ಹಗೆವು' ನಲ್ಲಿಟ್ಟಿದ್ದ ಧಾನ್ಯಗಳು ಕೊಳೆಯುತ್ತಿರುವುದರಿಂದ ರೈತರಿಗೆ ಭಾರಿ ನಷ್ಟ

Nagaraja AB

ಗದಗ್: ಗದಗ್ ತಾಲ್ಲೂಕಿನ ರೈತರು ನಿರಂತರ ಮಳೆ, ನೀರಿನ ಮಟ್ಟ ಏರಿಕೆಯಿಂದಾಗಿ ಹಗೆವು ನಲ್ಲಿ ಸಂಗ್ರಹ ಮಾಡಿದ್ದ ಧಾನ್ಯಗಳನ್ನು ಕಳೆದುಕೊಂಡಿದ್ದಾರೆ. ಇಂತಹ 250ಕ್ಕೂ ಹೆಚ್ಚು ಧಾನ್ಯ ಸಂಗ್ರಹವನ್ನು ಹೊಂದಿರುವ ತಿಮ್ಮಾಪುರ ಗ್ರಾಮದಲ್ಲಿ ಹೆಚ್ಚು ನಷ್ಟ ಸಂಭವಿಸಿದೆ. ಕನ್ನಡದಲ್ಲಿ ಹಗೆವು ಎಂದು ಕರೆಯಲಾಗುವ ಸುಮಾರು 70 ದಾಸ್ತಾನುಗಳು ಹಾನಿಯಾಗಿವೆ.

ಆಹಾರ ಧಾನ್ಯಗಳ ಸುರಕ್ಷತೆಗಾಗಿ ಮಾಡಲಾಗುತ್ತಿದ್ದ ಹಗೆವು ನಲ್ಲಿ ಧಾನ್ಯಗಳು ಕೊಳೆಯುತ್ತಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದು ತಿಮ್ಮಾಪುರ ರೈತರು ಹೇಳಿದ್ದಾರೆ. ಈ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರು ನಷ್ಟ ಅನುಭವಿಸಿದ್ದಾರೆ. ಪರಿಶೀಲನೆ ಇನ್ನೂ ನಡೆಯುತ್ತಿದೆ.

ಭಾರೀ ಮಳೆಯಿಂದಾಗಿ ಬೆಳೆ ಕಳೆದುಕೊಂಡಿದ್ದ ತಿಮ್ಮಾಪುರ ರೈತ ವೀರಭದ್ರಯ್ಯ, ಭಾನುವಾರ ಹಗೆವು ನಲ್ಲಿ ಇಟ್ಟಿದ್ದ ಜೋಳವನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದಾಗ ಜೋಳವಿದ್ದ 42 ಚೀಲಗಳು ಕೊಳೆತಿದ್ದವು. ಈ ಸುದ್ದಿ ಗ್ರಾಮ ಮತ್ತು ಇತರೆಡೆ ಹರಡಿ ತಮ್ಮ ಹಗೆವನ್ನು ಪರೀಕ್ಷಿಸಿದಾಗ ಇದು ಕಂಡುಬಂದಿದೆ.

ಭೂಮಿಯಲ್ಲಿ 10 ಅಡಿಗಳಿಗಿಂತ ಹೆಚ್ಚು ಆಳ ಅಗೆದು ಹಗೆವನ್ನು ನಿರ್ಮಾಣ ಮಾಡಲಾಗಿರುತ್ತದೆ.ಇದರಲ್ಲಿ ಸುಮಾರು 30 ರಿಂದ 40 ಚೀಲಗಳ ಆಹಾರ ಧಾನ್ಯಗಳನ್ನು ಸಂಗ್ರಹಿಸಬಹುದು. ರೈತರು ತಮ್ಮ ಆಹಾರ ಧಾನ್ಯಗಳನ್ನು ಒಂದು ಅಥವಾ ಎರಡು ವರ್ಷಗಳ ಕಾಲ ಈ ದಾಸ್ತಾನುಗಳಲ್ಲಿ ಸಂಗ್ರಹಿಸುತ್ತಾರೆ ಆದರೆ ಈ ಬಾರಿ ಧಾನ್ಯಗಳು ಕೊಳೆತು ಹೋಗುತ್ತಿರುವುದರಿಂದ ಅವರಿಗೆ ಆಶ್ಚರ್ಯವಾಗಿದೆ.

ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಧಾನ್ಯಗಳು ಕೊಳೆತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೋವಿಡ್-19 ಹೊಡೆತದ ನಂತರ ಸಂಗ್ರಹ ಮಾಡಿ ಇಡಲಾಗಿದ್ದ ಧಾನ್ಯಗಳಿಂದ ಹಣ ಪಡೆಯಬಹುದು ಎಂದುಕೊಂಡಿದ್ದ ರೈತರಿಗೆ ಭಾರಿ ನಿರಾಸೆಯಾಗಿದೆ.

SCROLL FOR NEXT