ಬೆಂಗಳೂರು: ಆರೋಗ್ಯ ಸೇತು ಆಪ್ ಹೊಂದಿಲ್ಲ ಎಂಬ ಒಂದೇ ಕಾರಣಕ್ಕೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಯಾವುದೇ ಅಂಗಸಂಸ್ಥೆಗಳು ನಾಗರಿಕರಿಗೆ ಯಾವುದೇ ಸೌಲಭ್ಯ ಅಥವಾ ಸೇವೆಯನ್ನು ನಿರಾಕರಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ.
ಡಿಜಿಟಲ್ ಹಕ್ಕು ಹೋರಾಟಗಾರ ಅನಿವರ್ ಎ. ಅರವಿಂದ್ ಆರೋಗ್ಯ ಸೇತು ಆಪ್ ಕಡ್ಡಾಯ ಬಳಕೆ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 'ಯಾವುದೇ ಆಪ್ ಬಳಕೆಯನ್ನು ಕಡ್ಡಾಯಗೊಳಿಸುವುದು ಖಾಸಗಿ ಹಕ್ಕು ಮತ್ತು ಇತರೆ ಮೂಲಭೂತ ಹಕ್ಕುಗಳ ಉಲ್ಲಂಘನೆ' ಎಂದು ಆರೋಪಿಸಿದ್ದರು. 'ಆರೋಗ್ಯ ಸೇತು ಆಪ್ ಇಲ್ಲದ ಕಾರಣಕ್ಕೆ ಸರ್ಕಾರದಿಂದ ಲಭಿಸುವ ಯಾವುದೇ ಸೌಲಭ್ಯ ಅಥವಾ ಸೇವೆಯನ್ನು ನಿರಾಕರಿಸಬಾರದು ಮತ್ತು ಈ ಅರ್ಜಿಯ ವಿಚಾರಣೆ ಮುಗಿಯುವವರೆಗೂ ಆರೋಗ್ಯ ಸೇತು ಆಪ್ಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಸರ್ಕಾರ ಮುಂದುವರಿಸಬಾರದು' ಎಂದು ಮನವಿ ಮಾಡಿದ್ದರು.
ಕೇಂದ್ರ ಸರ್ಕಾರದ ಉದ್ಯೋಗಿಗಳು ಆರೋಗ್ಯ ಸೇತು ಆಪ್ ಬಳಸುವುದನ್ನು ಕಡ್ಡಾಯಗೊಳಿಸಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸುತ್ತೋಲೆ ಹೊರಡಿಸಿದೆ' ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದರು. ಕೆಲವರ ಬಳಿ ಮೊಬೈಲ್ ಇರುವುದಿಲ್ಲ ಅಂತಹವರಿಗೆ ಆರೋಗ್ಯ ಸೇತು ಆಪ್ ಹೇಗೆ ಕಡ್ಡಾಯ ಮಾಡುತ್ತೀರಿ? ಯಾವುದೇ ಸ್ಥಳದಲ್ಲಿ, ಯಾವುದೇ ಸೌಲಭ್ಯಕ್ಕಾಗಿ ಆಪ್ ಬಳಕೆಗೆ ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲ ಸೂಚಿಸಿದೆ. ಯಾವುದೇ ಸೇವೆ ಪಡೆಯಲು ಈ ಆಪ್ ಬಳಕೆ ಕಡ್ಡಾಯವಲ್ಲ ಎಂದು ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸ್ಪಷ್ಟಪಡಿಸಿದೆ.