ರಾಜ್ಯ

ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧವನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿಯಿಂದ ಪ್ರಿಯಕರನ ಹತ್ಯೆ

Vishwanath S

ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧವನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ, ಮನೆಯ ಮಹಡಿ ಮೇಲೆ ಅಡಗಿ ಕುಳಿತಿದ್ದ ಪ್ರಿಯಕರನನ್ನು ಹತ್ಯೆ ಮಾಡಿರುವ ಘಟನೆ ತಲಘಟ್ಟಪುರದಲ್ಲಿ ನಡೆದಿದೆ.

ಮಂಡ್ಯ ಮೂಲದ ಸುರೇಶ್(34) ಕೊಲೆಯಾದ ವ್ಯಕ್ತಿ. ಹತ್ಯೆ ಆರೋಪಿ ತಲಘಟ್ಟಪುರ ದೇವೇಂದ್ರಪ್ಪ ಲೇಔಟ್ ನ ನಿವಾಸಿ ಮಲ್ಲಪ್ಪ(32) ನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ:   

ಕಲಬುರಗಿ ಮೂಲದ ಅರೋಪಿ ಮಲ್ಲಪ್ಪ 11 ವರ್ಷಗಳ ಹಿಂದೆ ಮದುವೆಯಾಗಿದ್ದು ಪತ್ನಿ, ಮೂವರು ಮಕ್ಕಳೊಂದಿಗೆ ಬೆಂಗಳೂರಿನ ದೇವೇಂದ್ರಪ್ಪ ಲೇಔಟ್ ನಲ್ಲಿ ವಾಸವಾಗಿದ್ದ. ನಗರದ ಜೆ.ಪಿ. ನಗರದ ಸಿಮೆಂಟ್ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರೆ, ಆತನ ಪತ್ನಿ ಮನೆ ಕೆಲಸಕ್ಕೆ ಹೋಗುತ್ತಿದ್ದರು.

ಕೆಲಸಕ್ಕೆ ಹೋಗುವ ವೇಳೆ ಪತ್ನಿಗೆ ಮಂಡ್ಯ ಜಿಲ್ಲೆಯ ಸುರೇಶ್ ಎಂಬಾತನ ಪರಿಚಯವಾಗಿ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಈ ವಿಷಯ ಅರಿತ ಮಲ್ಲಪ್ಪ ಹಲವು ಬಾರಿ ಪತ್ನಿಗೆ ಬುದ್ದಿ ಹೇಳಿದ್ದ. ಆದರೂ ಅಕ್ರಮ ಸಂಬಂಧ ಮುಂದುವರಿದಿತ್ತು.

ಇದರಿಂದ ಆಕ್ರೋಶಗೊಂಡು ಪತ್ನಿಯನ್ನು ರೆಡ್ ಹ್ಯಾಂಡಾಗಿ ಹಿಡಿಯಬೇಕೆಂದು ನಿರ್ಧರಿಸಿದ್ದ ಮಲ್ಲಪ್ಪ ಅ.16 ರಂದು 11.30 ಕ್ಕೆ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ತೆರಳಿದ್ದಾನೆ. ಆತ ಹೊರ ಹೋಗುತ್ತಿದ್ದಂತೆ ಸುರೇಶ್ ಮನೆಗೆ ಆಗಮಿಸಿದ್ದಾನೆ.

ಇದಾದ ಕೆಲವೇ ನಿಮಿಷದಲ್ಲಿ ಮಲ್ಲಪ್ಪ ಮನೆಗೆ ಆಗಮಿಸಿದ್ದಾನೆ. ಇದರಿಂದ ಬೆದರಿದ ಸುರೇಶ್ ಪಕ್ಕದ ಮನೆಯ ಮಹಡಿ ಮೇಲೆ ಅವಿತುಕೊಂಡಿದ್ದಾನೆ. ಮನೆ ಬಾಗಿಲು ತೆಗೆದ ಪತ್ನಿಯ ಹಾವಭಾವ ಗಮನಿಸಿದ ಪತಿ ಮನೆಯ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾನೆ. ಮಹಡಿಗೆ ತೆರಳಿ ನೋಡಿದಾಗ ಅಲ್ಲಿ ಸುರೇಶ್ ಅವಿತು ಕುಳಿತಿರುವುದು ಕಂಡುಬಂದಿದೆ. ತಕ್ಷಣ ಅಲ್ಲೇ ಇದ್ದ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ತಲಘಟ್ಟಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

SCROLL FOR NEXT