ರಾಜ್ಯ

ದಸರಾ ಮಹೋತ್ಸವ: ಸೋಮವಾರದ ಜಂಬೂಸವಾರಿಗೆ ಅಂತಿಮ ಹಂತದ ತಾಲೀಮು

Lingaraj Badiger

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರ ಮಹೋತ್ಸವದ ಪ್ರಧಾನ ಆಕರ್ಷಣೆಯಾದ ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದ್ದು, ಶನಿವಾರ ಅಂತಿಮ ಹಂತದ ತಾಲೀಮು ನಡೆಯಿತು.

ದಸರಾ ಮಹೋತ್ಸವದ ಮುಖ್ಯ ಭಾಗವಾದ ಜಂಬೂ ಸವಾರಿ ಈ ಬಾರಿ ಅತ್ಯಂತ ಸರಳವಾಗಿ ನಡೆಯುತ್ತಿದ್ದು, ಅರಮನೆ ಆವರಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಅಂತಿಮ ಹಂತದ ತಾಲೀಮು ನಡೆಸಿದರು.

ಅಂಬಾರಿ ಹೊರುವ ಅಭಿಮನ್ಯುವಿಗೆ ಸುಮಾರು 750 ಕೆಜಿ ತೂಕದ ಮರಳಿನ ಮೂಟೆ ಹೇರಿ ತಾಲೀಮು ನಡೆಸಲಾಯಿತು. ಈ ವೇಳೆ ಅಶ್ವದಳಗಳು ಅಭಿಮನ್ಯುವಿನ ಹಿಂದೆ ಹೆಜ್ಜೆ ಹಾಕಿದವು. ಸೋಮವಾರ ಅಭಿಮನ್ಯು 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊರಲಿದ್ದಾನೆ. 

ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲಾಗುತ್ತಿದ್ದು, ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ಅರ್ದಗಂಟೆಯಲ್ಲಿ ಕಾರ್ಯಕ್ರಮ ಮುಕ್ತಾಯವಾಗಲಿದೆ. 300 ಮಂದಿ ಮಾತ್ರ ಕಾರ್ಯಕ್ರಮಕ್ಕೆ ನೇರ ಸಾಕ್ಷಿಯಾಗಲಿದ್ದಾರೆ.

ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಜನ ಸಂದಣಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮ ವೀಕ್ಷಣೆಗಾಗಿ ಎಲ್.ಇ.ಡಿ ಟಿ.ವಿ. ಪರದೆಗಳನ್ನು ಅಳವಡಿಸಲಾಗಿದೆ. ದೂರದರ್ಶನ ಚಂದನಾಹಿನಿ ಮೂಲಕ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು. 

ಆನೆ ವೈದ್ಯ ಡಾ. ನಾಗರಾಜ್‌ ಮಾತನಾಡಿ, ಈ ವರೆಗೆ ಜಂಬೂ ಸವಾರಿಗೆ ಉತ್ತಮವಾಗಿ ತಾಲೀಮು ನಡೆದಿದೆ. ಎಲ್ಲ ಆನೆಗಳೂ ಆರೋಗ್ಯವಾಗಿವೆ . ಯಾವುದೇ ಸಮಸ್ಯೆ ಇಲ್ಲ. ಜಂಬೂ ಸವಾರಿ ಅತ್ಯಂತ ಯಶಸ್ವಿಯಾಗಿ ನೆರವೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT