ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ಇತಿಹಾಸ ಪ್ರಸಿದ್ಧ ಗವಿ ಗಂಗಾಧರೇಶ್ವರ ದೇವಸ್ಥಾನದ ಬಳಿ ಗೋಡೆ ಕುಸಿದು ಬಿದ್ದಿದೆ.
ಗವಿಪುರಂ ಗುಟ್ಟಹಳ್ಳಿಯಲ್ಲಿರುವ ದೇವಸ್ಥಾನದ ಗೋಡೆ ಭಾರೀ ಮಳೆಯಿಂದ ಭಾಗಶಃ ಕುಸಿದು ಬಿದ್ದು, ದೇಗುಲದ ಆವರಣ ಗೋಡೆಗಳಿಗೂ ಕೂಡ ಭಾಗಶಃ ಹಾನಿಯುಂಟಾಗಿದೆ ಎಂದು ವರದಿಗಳು ತಿಳಿಸಿವೆ.
ಈ ವಪರೆಗೆ ರಾಜ್ಯದ ಉತ್ತರ ಭಾಗ, ಕರಾವಳಿ ಹಾಗೂ ಮಲೆನಾಡನ್ನು ಮುಳುಗಿಸಿದ್ದ ಮಳೆ ಇದೀಗ ರಾಜಧಾನಿಯನ್ನೂ ಮುಳುಗಿಸಿದೆ. ಶುಕ್ರವಾರ ಗುಡುಗು-ಸಿಡಿಲಿನೊಂದಿಗೆ ವರುಣ ಸೃಷ್ಟಿಸಿದ್ದ ಆರ್ಭಟಕ್ಕೆ ನವರಾತ್ರಿಯ 7ನೇ ದಿನವಾದ ಕಾಳರಾತ್ರಿಯು ನೈಋತ್ಯ ಹಾಗೂ ದಕ್ಷಿಣ ಬೆಂಗಳೂರು ಜನತೆಗೆ ಕರಾಳ ರಾತ್ರಿಯಾಗಿ ಬದಲಾಗಿದೆ.
ನಗರದಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಅನೇಕ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಮಳೆಯಿಂದಾಗಿ ಯಾವುದೇ ಪ್ರಾಣಹಾನಿಗಳಾಗಿರುವ ವರದಿಯಾಗಿಲ್ಲ. ಆದರೆ, ಸುಮಾರು 780 ಮನೆಗಳು ಮುಳುಗಿವೆ ಎಂದು ಬಿಬಿಎಂಪಿ ಅಂದಾಜಿಸಿದೆ.