ರಾಜ್ಯ

ಕೆ. ಕಲ್ಯಾಣ್ ದಂಪತಿ ಕಲಹ ಪ್ರಕರಣದ ಪ್ರಮುಖ ಆರೋಪಿ ಗಂಗಾ ಕುಲಕುರ್ಣಿ ಆತ್ಮಹತ್ಯೆ

Lingaraj Badiger

ಕೊಪ್ಪಳ: ಖ್ಯಾತ ಚಿತ್ರ ಸಾಹಿತಿ, ಪ್ರೇಮಕವಿ ಕೆ. ಕಲ್ಯಾಣ್ ಬಾಳಲ್ಲಿ ಬಿರುಕು ಮೂಡಿಸಿದ್ದ ಪ್ರಮುಖ ಆರೋಪಿ ಗಂಗಾ ಕುಲಕರ್ಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
 
ಪ್ರಕರಣವೊಂದಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ ಕುಲಕರ್ಣಿ ಕುಸಿದು ಬಿದ್ದಿದ್ದಾರೆ. ವಿಷಸೇವಿಸಿಯೇ ನ್ಯಾಯಾಲಯಕ್ಕೆ ಬಂದಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
 
ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸಂತೋಷ್ ಕುಲಕರ್ಣಿ ಎಂಬವರಿಂದ ಮೂರು ಲಕ್ಷ ದೋಚಿದ್ದ ಆರೋಪಕ್ಕೆ ಗಂಗಾ ಕುಲಕರ್ಣಿ ಗುರಿಯಾಗಿದ್ದರು. ಈ ಸಂಬಂಧ 2016ರಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿತ್ತು.
 
ಸಾಹಿತಿ ಕಲ್ಯಾಣ್ ಪತ್ನಿ ಅಶ್ವಿನಿಯನ್ನು ಹಾಗೂ ಅತ್ತೆ, ಮಾವರನ್ನು ಪುಸಲಾಯಿಸಿ ಅಪಹರಣ ಮಾಡಿರುವ ಆರೋಪಕ್ಕೂ ಗಂಗಾ ಗುರಿಯಾಗಿದ್ದರು. ಪತ್ನಿ ಅಶ್ವಿನಿ ಅಕೌಂಟ್‍ನಿಂದ 19 ಲಕ್ಷ ರೂಪಾಯಿ ತನ್ನ ಅಕೌಂಟ್‍ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಆರೋಪ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ಶಿವಾನಂದ ವಾಲಿ, ಗಂಗಾ ಕುಲಕರ್ಣಿ ಎಂಬವರ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಲ್ಯಾಣ್ ಪತ್ನಿ ಅಶ್ವಿನಿಯವರಿಂದ ಪೊಲೀಸರು ಮಾಹಿತಿ ಪಡೆದಿದ್ದರು. ಸದ್ಯ ಪತಿ ಕಲ್ಯಾಣ್ ವಿರುದ್ಧ ನೀಡಿರುವ ವಿಚ್ಛೇದನ ಹಿಂಪಡೆಯುವುದಾಗಿ ಅಶ್ವಿನಿ ತಿಳಿಸಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

SCROLL FOR NEXT