ರಾಜ್ಯ

ರಾಜರಾಜೇಶ್ವರಿ ನಗರ ಉಪಚುನಾವಣೆ: ಮುನಿರತ್ನ ಪರ ಸ್ಟಾರ್ ನಟರ ಭರ್ಜರಿ ಪ್ರಚಾರ

Manjula VN

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆ ಅಖಾಡದ ಕ್ಲೈಮ್ಯಾಕ್ಸ್ ನಲ್ಲಿ ಬಿಜೆಪಿ ಹುರಿಯಾಳು ಹಾಗೂ ಮಾಜಿ ಶಾಸಕ ಮುನಿರತ್ನ ಅವರಿಕೆ ಶಕ್ತಿ ತುಂಬಿದ ನಟ ದರ್ಶನ್ ಅವರು ದಿನವಿಡೀ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದರು. 

ಪ್ರಚಾರದುದ್ದಕ್ಕೂ ಎಲ್ಲಿಯೂ ಕೂಡ ವಿರೋಧಿ ಅಭ್ಯರ್ಥಿ ಹೆಸರು ಪ್ರಸ್ತಾಪಿಸದೆ, ವಿರೋಧಿಗಳ ಮಾತುಗಳಿಗೆ ಪ್ರತಿಕ್ರಿಯಿಸದೆ, ಟೀಕೆಗಳಿಗೆ ಟಾಂಗ್ ನೀಡದೆ ದರ್ಶನ್, ತಮ್ಮ ಎಂದಿನ ಶೈಲಿಯಲ್ಲಿಯೇ ಮುಗುಳು ನಗೆ ಬೀರುತ್ತಾ ಮುನಿರತ್ನ ಗೆಲುವಿಗೆ ಮತದಾರರಲ್ಲಿ ಮೊರೆಯಿಟ್ಟರು. 

ಕೊರೋನಾ ಕಾಲದಲ್ಲಿ ಆರ್.ಆರ್.ನಗರ ಕ್ಷೇತ್ರದ ಜನರ ನೋವಿಗೆ ಮುನಿರತ್ನ ಸ್ಪಂದಿಸಿದ್ದಾರೆ. ಈ ಮಾನವೀಯತೆ ಗುಣಕ್ಕಾಗಿ ಚುನಾವಣೆಯಲ್ಲಿ ಅವರ ಪರ ನಾನು ಪ್ರಚಾರ ನಡೆಸುತ್ತಿದ್ದೇನೆಂದು ಭಾಷಣದಲ್ಲಿ ದರ್ಶನ್ ಅವರು ಹೇಳಿದ್ದಾರೆ. 

ನಾನಿಲ್ಲಿ ಯಾವುದೇ ಪಕ್ಷದ ಪರ ಮತಯಾಚನೆ ಮಾಡಲು ಬಂದಿಲ್ಲ. ವೈಯಕ್ತಿಕವಾಗಿ ಮುನಿರತ್ನ ಅವರು ಗೊತ್ತಿರುವುದರಿಂದ ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ. 

ದರ್ಶನ್ ಅವರಗೊಂದಿಗೆ ನಟಿ ಅಮೂಲ್ಯ ಹಾಗೂ ನಿರ್ಮಾಪಕ ರಾಕ್'ಲೈನ್ ವೆಂಕಟೇಶ್ ಕೂಡ ರೋಡ್ ಶೋ ನಡೆಸಿ ಮುನಿರತ್ನ ಪರ ಮತಯಾಚನೆ ಮಾಡಿದರು. 

ಇದೇ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಇತರೆ ನಾಯಕರು ರಾಜರಾಜೇಶ್ವರಿ ನಗರ, ಪೀಣ್ಯ, ಜಾಲಹಳ್ಳಿ ಹಾಗೂ ಇತರೆ ಪ್ರದೇಶಗಳಲ್ಲೂ ಪ್ರಚಾರ ನಡೆಸಿದರು. 

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದು ನೀವು ಮುನಿರತ್ನ ಅವರಿಗೆ ಮತ ಹಾಕಿದ್ದೇ ಆದರೆ, ಮುಂದೆ ನೀವು ಕೆಟ್ಟ ದಿನಗಳನ್ನು ನೋಡಲಿದ್ದೀರಿ. ಕಾಂಗ್ರೆಸ್ ನಿಂದಾಗಿ ಈ ಹಿಂದೆ ಎರಡು ಬಾರಿ ಮುನಿರತ್ನ ಅವರು ಗೆಲುವು ಸಾಧಿಸಿದ್ದರು ವೈಯಕ್ತಿಕ ಕೆಲಸಗಳಿಂದಾಗಿ ಅಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್.ಆರ್.ನಗರ ಕ್ಷೇತ್ರ ಅಭಿವೃದ್ಧಿಗಾಗಿ ರೂ.2,000 ಕೋಟಿ ಬಿಡುಗಡೆ ಮಾಡಿದ್ದೆ ಎಂದು ತಿಳಿಸಿದ್ದಾರೆ. 

SCROLL FOR NEXT