ರಾಜ್ಯ

ಸ್ಯಾಂಡಲ್'ವುಡ್ ಡ್ರಗ್ಸ್ ನಂಟು ಪ್ರಕರಣ: ಚಿನ್ನಾಭರಣ ವ್ಯಾಪಾರಿ ಸಿಸಿಬಿ ಬಲೆಗೆ

Manjula VN

ಬೆಂಗಳೂರು: ಸ್ಯಾಂಡಲ್'ವುಡ್ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಿಸಿಬಿ ಕಾರ್ಯಾಚರಣೆ ಮುಂದುವರೆದಿದ್ದು, ನಗರದ ಚಿನ್ನಾಭರಣ ವ್ಯಾಪಾರಿಯೊಬ್ಬರನ್ನು ಶನಿವಾರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ವೈಯಾಲಿಕಾವಲ್ ನಿವಾಸಿ ವೈಭವ್ ಜೈನ್ ಬಂಧಿತನಾಗಿದ್ದು, ಚಲನಚಿತ್ರ ನಟಿ ರಾಗಿಣಿ ದ್ವಿವೇದಿಯ ಸ್ನೇಹಿತನೂ ಆಗಿರುವ ಸಾರಿಗೆ ಇಲಾಖೆ ಉದ್ಯೋಗಿ ರವಿಶಂಕರ್ ಜೊತೆ ವೈಭವ್ ಸ್ನೇಹ ಹೊಂದಿದ್ದ. ಪೇಜ್ ತ್ರಿ ಪಾರ್ಟಿಗಳ ಆಯೋಜನೆ, ಡ್ರಗ್ಸ್ ಸೇವನೆ ಮತ್ತು ಮಾರಾಟದ ಆರೋಪದ ಮೇರೆಗೆ ಬಂಧಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. 

ವೈಯಾಲಿಕಾವಲ್'ನ ವೈಭವ್, ಮಲ್ಲೇಶ್ವರದಲ್ಲಿ ಚಿನ್ನಾಭರಣ ಮಾರಾಟ ಮಳಿಗೆ ನಡೆಸುತ್ತಿದ್ದ. ಇತ್ತೀಚೆಗೆ ಕೌಟುಂಬಿಕ ವಿಚಾರವಾಗಿ ವೈಭವ್ ದಂಪತಿ ದೂರವಾಗಿದ್ದರು. ಕೌಟುಂಬಿಕ ಕಲಹ ಸಂಬಂಧ ಆತನ ಮೇಲೆ ವೈಯಾಲಿಕಾವರ್ ಠಾಣೆಯಲ್ಲಿ ವೈಭವ್ ಪತ್ನಿ ದೂರು ಕೂಡ ದಾಖಲಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

4-5 ವರ್ಷಗಳಿಂದ ರಾಗಿಣಿ ಸ್ನೇಹಿತ ರವಿಶಂಕರ್ ಜೊತೆ ವೈಭವ್ ಸ್ನೇಹವಿತ್ತು. ಇದೇ ಗೆಳೆತನದಲ್ಲಿ ಪಬ್, ಕ್ಲಬ್, ರೆಸಾರ್ಟ್ ಹಾಗೂ ಹೋಟೆಲ್ ಗಳಲ್ಲಿ ನಡೆದಿದ್ದ ಹಲವು ಪಾರ್ಟಿಗಳಿಗೆ ರವಿಶಂಕರ್'ನೊಂದಿಗೆ ವೈಭವ್ ಪಾಲ್ಗೊಂಡಿದ್ದ. ಅಲ್ಲದೆ, ಕೆಲ ಪಾರ್ಟಿಗಲನ್ನು ಕೂಡ ವೈಭವ್ ಆಯೋಜಿಸಿದ್ದ ಎನ್ನಲಾಗುತ್ತಿದೆ. 

ಕೆಲ ದಿನಗಳ ಹಿಂದೆ ರವಿಶಂಕರ್ ಮಾಹಿತಿ ಮೇರೆಗೆ ವೈಭವ್ನನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ, ತನಗೆ ಕೊರೋನಾ ಪಾಸಿಟಿವ್ ಇದೆ ಎಂದು ಅಧಿಕಾರಿಗಳಿಗೆ ಸುಳ್ಳು ಹೇಳಿ ಆರೋಪಿ ತಪ್ಪಿಸಿಕೊಂಡಿದ್ದ. ಬಳಿಕ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಾಹಿತಿ ಪಡೆದು ಬಂಧಿಸಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ. 

SCROLL FOR NEXT