ರಾಜ್ಯ

ನಗರಕ್ಕೆ ಮತ್ತೆ ಬೈಕ್ ಟ್ಯಾಕ್ಸಿ ತನ್ನಿ: ಸರ್ಕಾರಕ್ಕೆ ತಜ್ಞರ ಸಲಹೆ

Srinivasamurthy VN

ಬೆಂಗಳೂರು: ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರನಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸೇವೆಯನ್ನು ಜಾರಿಗೆ ತನ್ನಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬೆಂಗಳೂರು ಸುಗಮ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಕರು, ಶಾಸಕರು ಮತ್ತು ಉದ್ಯಮಿಗಳು ತಮ್ಮ ವರದಿ ಮತ್ತು ಶಿಫಾರಸುಗಳನ್ನು ಉಪ ಮುಖ್ಯಮಂತ್ರಿ ಡಾ.ಸಿಎನ್ ಅಶ್ವಥ್ ನಾರಾಯಣ್ ಅವರಿಗೆ ಸಲ್ಲಿಕೆ ಮಾಡಿದ್ದು, ವರ್ಚುವಲ್ ಸಭೆಯ ಮೂಲಕ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.  ಸುಗಮ ಸಾರ್ವಜನಿಕ ಸಂಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದ್ದು, ಈ ವೇಳೆ ಶೇ.48ರಷ್ಟು ಮಂದಿ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಬಳಕೆ ಮಾಡುತ್ತಿದ್ದು, ಶೇ.80ರಷ್ಡು ಮಂದಿ ದ್ವಿಚಕ್ರವಾಹನ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ನಗರಕ್ಕೆ ಬೈಕ್ ಟ್ಯಾಕ್ಸಿ ಅವಶ್ಯಕತೆ ಇದೆ ಎಂದು ಬೆಂಗಳೂರು ನೀಡ್ಸ್ ಯೂ  ಕಾರ್ಯಕ್ರಮದಲ್ಲಿ ಬೆಂಗಳೂರು ಪೊಲಿಟಿಕಲ್ ಆ್ಯಕ್ಷನ್ ಕಮಿಟಿ ಸಿಇಒ ರೇವತಿ ಅಶೋಕ್ ಹೇಳಿದ್ದಾರೆ.

ಅಂತೆಯೇ ಸರ್ಕಾರ ತಾವು ನೀಡಿರುವ ಶಿಫಾರಸ್ಸು ಮತ್ತು ಸಲಹೆಗಳನ್ನು ಸ್ವೀಕರಿಸಿದ್ದು, ಲಂಡನ್ ಮಾದರಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ ನಿರ್ಮಾಣ ಮಾಡಲು ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಅಶ್ವಥ್ ನಾರಾಯಣ ಅವರು, ಪ್ರಯಾಣಿಕರಿಗೆ ಅನುಕೂಲವಾಗುವ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಿದೆ. ಇದಕ್ಕೆ ಅನುಗುಣವಾಗಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯ ಮೂಲಕ ಸಾರ್ವಜನಿಕ ಸಾರಿಗೆಯನ್ನು 41 ಪ್ರತಿಶತದಿಂದ 73 ಕ್ಕೆ  ಹೆಚ್ಚಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಸಾರಿಗೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರು ಮಾತನಾಡಿ, ವಿವಿಧ ಏಜೆನ್ಸಿಗಳ ನಡುವೆ ಸಮನ್ವಯವನ್ನು ಸುಧಾರಿಸಲು ಸರ್ಕಾರ ಕೆಲಸ ಮಾಡುತ್ತಿದೆ. ನಾವು ಮೈಸೂರಿನ ಟ್ರಿನ್‌ಟ್ರಿನ್ ಬೈಸಿಕಲ್  ವ್ಯವಸ್ಥೆಯಂತೆಯೇ ಬೇರೆಡೆ ಕೆಲಸ ಮಾಡಿದ ಸಂಸ್ಥೆಗಳ ಉದಾಹರಣೆ ನೋಡಿದ್ದು, ಬೆಂಗಳೂರಿನಲ್ಲಿಯೂ ಇದೇ ರೀತಿಯ ಸಾರಿಗೆ ವ್ಯವಸ್ಥೆ ನಿರ್ಮಾಣ ಮಾಡುವ ಕುರಿತು ಕಾರ್ಯಯೋಜನೆ ರೂಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು, ವಾಹನ ಸಂಚಾರ ಮೇಲ್ವಿಚಾರಣೆಗಾಗಿ ನಾವು ನಗರದಾದ್ಯಂತ 1,500 ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಸ್ಥಾಪಿಸಿದ್ದೇವೆ ಮತ್ತು ಟ್ರಾಫಿಕ್ ಹಾಟ್‌ಸ್ಪಾಟ್‌ಗಳನ್ನು ನಿರ್ವಹಿಸಲು ಸಾಕಷ್ಟು ಡೇಟಾವನ್ನು ಸಂಗ್ರಹಿಸಿದ್ದೇವೆ  ಎಂದು ಹೇಳಿದರು. 

SCROLL FOR NEXT