ರಾಜ್ಯ

ಬೆಂಗಳೂರಿನಲ್ಲಿ ಎನ್ಐಎ ಶಾಶ್ವತ ಕಚೇರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ: ಸಂಸದ ತೇಜಸ್ವಿ ಸೂರ್ಯ

Manjula VN

ನವದೆಹಲಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಶಾಶ್ವತ ಕಚೇರಿ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಒಪ್ಪಿದೆ ನೀಡಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ನೂತನ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಹೇಳಿದ್ದಾರೆ, 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶುಕ್ರವಾರ ತೇಜಸ್ವಿ ಸೂರ್ಯ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ಡಿಜೆ ಹಳ್ಳಿ ಗಲಭೆ ಕುರಿತಂತೆ ಚರ್ಚೆ ನಡೆಸಿ ನಗರದಲ್ಲಿ ಎನ್ಐಎ ಶಾಶ್ವತ ಕಚೇರಿ ಸ್ಥಾಪನೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿತ್ತು.

ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ತೇಜಸ್ವಿ ಸೂರ್ಯ ಅವರು, ಅಮಿತ್ ಶಾ ಭೇಟಿ ವೇಳೆ ಬೆಂಗಳೂರಿನ ಡಿಜೆಹಳ್ಳಿ ಹಾಗೂ ಕೆಜೆಹಳ್ಳಿಗಳಲ್ಲಿ ಇತ್ತೀಚೆಗೆ ಗಲಭೆ ನಡೆದಿರುವ ಹಾಗೂ ಈ ಹಿಂದೆ ರಾಜ್ಯದಲ್ಲಿ ಅನೇಕ ಉಗ್ರ ಸಂಘಟನೆಗಳ ದಾಳಿಯ ಹಿನ್ನಲೆಯಲ್ಲಿ ಸೂಕ್ತ ತನಿಖೆಗಾಗಿ ಎನ್ಐಎ ಕಚೇರಿ ಆರಂಭಿಸುವಂತೆ ಮನವಿ ಸಲ್ಲಿಸಲಾಯಿತು. ಈ ವೇಳೆ ಅಮಿತ್ ಶಾ ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. 

ಅನೇಕ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉಗ್ರರನ್ನು, ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ನಗರದಲ್ಲಿ ಎನ್ಐಎ ಶಾಶ್ವತ ಕಚೇರಿಯ ಅಗತ್ಯ ಇದೆ ಎಂಬುದನ್ನು ಸಚಿವರಿಗೆ‌ ಮನವರಿಕೆ‌ ಮಾಡಲಾಗಿದೆ ಎಂದು ಅವರು ತಿಳಿಸಿದರು. 

ಬೆಂಗಳೂರಿನ ರೋಸ್‌ ಈರುಳ್ಳಿ ‌ರಫ್ತನ್ನು ರದ್ದುಗೊಳಿಸದಂತೆ ಕೋರಿ ಕೇಂದ್ರದ ವಾಣಿಜ್ಯ‌ ಸಚಿವರಿಗೆ ಮನವಿ‌ ಸಲ್ಲಿಸಲಾಗಿದೆ. ಅದೇ ರೀತಿ ವಸತಿ ಯೋಜನೆ ಅಡಿ ರಾಜ್ಯದ‌ ಬಡ‌ಜನತೆಗೆ  ಮತ್ತಷ್ಟು ಮನೆಗಳನ್ನು ಮಂಜೂರು ಮಾಡುವಂತೆ ವಸತಿ ಸಚಿವ ವಿ.ಸೋಮಣ್ಣ ಜೊತೆ ತೆರಳಿ ಕೇಂದ್ರಕ್ಕೆ ಕೋರಲಾಗಿದೆ.

ಬೆಂಗಳೂರಿನ ‌ಗೋವಿಂದರಾಜ‌ ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸುವಂತೆಯೂ ಮನವಿ‌ ಸಲ್ಲಿಸಲಾಗಿದ್ದು ಕೇಂದ್ರವು ಈಡೇರಿಸುವ ಭರವಸೆ‌ ನೀಡಿದೆ ಎಂದು ಅವರು ತಿಳಿಸಿದರು.

ಯುವ‌ ಮೋರ್ಚಾ ಅಧ್ಯಕ್ಷ ಸ್ಥಾನದ ನಿರೀಕ್ಷೆ‌ ಇರಲಿಲ್ಲ. ಪ್ರಧಾನಿ ಮೋದಿ ಹಾಗೂ ಪಕ್ಷದ ‌ಅಧ್ಯಕ್ಷ‌ ಜೆ.ಪಿ. ನಡ್ಡಾ ಅವರು ಯುವಕರಿಗೆ ಸ್ಥಾನಮಾನದೊಂದಿಗೆ ಅಧಿಕಾರ‌ ನೀಡಿರುವುದು ಅಭಿನಂದನೀಯ‌ ಎಂದಿದ್ದಾರೆ. 

SCROLL FOR NEXT