ಬೆಂಗಳೂರು: ಕಳೆದ ಜುಲೈ 5ರಿಂದ ನಿರಂತರವಾಗಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಲೇ ಇದೆ. ಶೇಕಡಾ 3.32ರಷ್ಟಿದ್ದ ಕೊರೋನಾ ಸೋಂಕಿನ ಪ್ರಮಾಣ ಶೇಕಡಾ 12.34ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ ಶೇಕಡಾ 2ರಿಂದ 1.48ಕ್ಕೆ ಇಳಿದಿರುವುದು ಸಮಾಧಾನಕರ ಸಂಗತಿ.
ಕರ್ನಾಟಕ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ ಎಂ ಕೆ ಸುದರ್ಶನ್ ಹೇಳುವ ಪ್ರಕಾರ, ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಗಳು ಕಡಿಮೆಯಾಗಿರುವುದು ಮತ್ತು ಹೆಚ್ಚೆಚ್ಚು ಆರ್ ಟಿ-ಪಿಸಿಆರ್ ಟೆಸ್ಟ್ ಗಳನ್ನು ಮಾಡುತ್ತಿರುವುದು.
ಕೊರೋನಾ ಸೋಂಕು ಬಡವರು ಮತ್ತು ಕೆಳ ಮಧ್ಯಮ ವರ್ಗದವರಲ್ಲಿ ಹೆಚ್ಚಾಗಿರುತ್ತದೆ. ಏಕೆಂದರೆ ಅವರ ಜೀವನ ಪರಿಸ್ಥಿತಿಯಿಂದಾಗಿ. ಜನದಟ್ಟಣೆ ಮತ್ತು ಮಾಸ್ಕ್ ಧರಿಸುವ ಬಗ್ಗೆ ಸಾಕಷ್ಟು ಅರಿವು ಇಲ್ಲದಿರುವುದು. ಇಂಥವರು ಕೋವಿಡ್-19ನ್ನು ಮನೆಗೆ ತಂದು ಬೇರೆಯವರಿಗೆ ಸೋಂಕು ಹಬ್ಬಿಸುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಂಡಿರುವುದಿಲ್ಲ. ಅಧಿಕ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಸೋಂಕು ಹರಡುವುದು ಕಡಿಮೆ ಎಂದು ಡಾ ಸುದರ್ಶನ್ ಹೇಳುತ್ತಾರೆ.
ನೆಗೆಟಿವ್ ಮತ್ತು ಪಾಸಿಟಿವ್ ಹೊಂದಿರುವವರು ಮಾಸ್ಕ್ ಧರಿಸದಿರುವುದು, ಒಂದು ಮೀಟರ್ ಗಿಂತ ಕಡಿಮೆ ಅಂತರದಲ್ಲಿ ನಿಂತು ಮಾತನಾಡುವುದು, 20 ನಿಮಿಷಕ್ಕೂ ಹೆಚ್ಚು ಸಮಯ ಸಂವಾದ ನಡೆಸುವುದರಿಂದ ಸೋಂಕು ಬೇಗನೆ ಹರಡುತ್ತದೆ ಅಲ್ಲದೆ, ಕುಟುಂಬ ಸದಸ್ಯರೆಲ್ಲ ಒಟ್ಟೊಟ್ಟಿಗೆ ಕುಳಿತುಕೊಳ್ಳುವುದರಿಂದ ಸೋಂಕು ಬಹುಬೇಗನೆ ಹರಡುತ್ತದೆ ಎನ್ನುತ್ತಾರೆ ಡಾ ಸುದರ್ಶನ್.
ಸುರಕ್ಷತೆ ಕ್ರಮಗಳ ಬಗ್ಗೆ ನಿರ್ಲಕ್ಷ್ಯ: ನಿಮ್ಹಾನ್ಸ್ ನ ರೋಗಾಣು ಶಾಸ್ತ್ರಜ್ಞ ಡಾ ಜಿ ಗುರುರಾಜ್, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ತಪಾಸಣೆ ಮಾಡಿಸಿಕೊಳ್ಳುವುದರಿಂದ, ನಿರ್ಲಕ್ಷ್ಯ ಮಾಡುವುದರಿಂದ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದೆ ಎನ್ನುತ್ತಾರೆ.
ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ 19 ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದೆ. ಸೆಪ್ಟೆಂಬರ್ ಕೊನೆಗೆ 14 ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣ ಕಡಿಮೆಯಾಗಿದೆ. 7 ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳು ಹಿಂದಿನ ರೀತಿಯೇ ಇವೆ. ಇನ್ನು 9 ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಾಗಿದೆ.ತಪಾಸಣೆ ಹೆಚ್ಚಾದರೆ ಪಾಸಿಟಿವ್ ಪ್ರಕರಣಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಬೇಗನೆ ನಿಯಂತ್ರಿಸಬಹುದು ಎಂದು ರಾಜ್ಯ ಕೋವಿಡ್-19 ವಾರ್ ರೂಂನ ಉಸ್ತುವಾರಿ ಮನೀಶ್ ಮೌದ್ಗಿಲ್ ಹೇಳುತ್ತಾರೆ.
ಸೆಪ್ಟೆಂಬರ್ 10ರ ಹೊತ್ತಿಗೆ ರಾಜ್ಯದಲ್ಲಿ ಸಕ್ರಿಯ ಕೇಸುಗಳು 1 ಲಕ್ಷ ದಾಟಿದ್ದರೆ ಸೆಪ್ಟೆಂಬರ್ 27ರ ಹೊತ್ತಿಗೆ 1 ಲಕ್ಷದ 4 ಸಾವಿರದ 724 ಆಗಿದೆ. ಆಗಸ್ಟ್ ನಿಂದ ಸೆಪ್ಟೆಂಬರ್ ಗೆ ಸಕ್ರಿಯ ಕೇಸುಗಳು ಹೆಚ್ಚಾಗಿವೆ.