ರಾಜ್ಯ

ವಿಶೇಷ ಪ್ಯಾಕೇಜ್ ನೀಡುವ ಕುರಿತು ಸಿಎಂ ಜೊತೆ ಚರ್ಚಿಸಿ ತೀರ್ಮಾನ: ಸಚಿವ ಸೋಮಣ್ಣ

Lingaraj Badiger

ಬೆಂಗಳೂರು: ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗುವ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದೆ. ಅಧಿಕೃತ ಘೋಷಣೆ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಹೇಳಿದ್ದಾರೆ.

ಹೆಬ್ಬಾಳ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದಾಗ ಏನೇನು ಅನಾನುಕೂಲ ಆಗಿದೆ ಎನ್ನುವುದು ಗೊತ್ತಿದೆ. ಇನ್ನು ಎಂಟತ್ತು ದಿನಗಳಲ್ಲಿ ಪರಿಸ್ಥಿತಿ ನೋಡುತ್ತೇವೆ. ನಾವು ಶಾಸಕರು ನಮ್ಮ ಕ್ಷೇತ್ರಗಳಲ್ಲಿ ಸಂಕಷ್ಟಕ್ಕೊಳಗಾದವರಿಗೆ ನೆರವು ಕೊಡುತ್ತೇವೆ. ಯಾರೂ ಹಸಿವಿನಿಂದ ಇರಲು ಬಿಡುವುದಿಲ್ಲ ಎಂದರು.

ಸರ್ಕಾರದಿಂದಲೂ ಪರಿಹಾರ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಹಾರ ನೀಡುವ ಬಗ್ಗೆ ಚರ್ಚೆ ಆಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ಯಾಕೇಜ್ ಘೋಷಿಸಿಲ್ಲ ಎಂದು ಆರೋಪ, ಟೀಕೆ ಮಾಡುವುದು ಅವರಿಗೆ ಸೇರಿದ್ದು. ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

ಇನ್ನು ಜನರಲ್ಲಿ ಗೊಂದಲ ಇರುವುದರಿಂದ ತಮ್ಮ ಊರುಗಳಿಗೆ ಜನರು ಗುಳೆ ಹೋಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಶೋಷಣೆ, ಹಣ ವಸೂಲಿ ಮಾಡುತ್ತಿರುವ ಬಗ್ಗೆ ಸಚಿವ ಸೋಮಣ್ಣ ಅಸಹಾಯಕತೆ ವ್ಯಕ್ತಪಡಿಸಿ, ಖಾಸಗಿ ಆಸ್ಪತ್ರೆಗಳ ಸುಲಿಗೆ ನಮ್ಮ ಗಮನಕ್ಕೂ ಬಂದಿದೆ. ಸತ್ತ ಹೆಣವನ್ನೂ ಹಣ ಕೊಟ್ಟರೆ ಮಾತ್ರವೇ ಕೊಡುವ ಪರಿಸ್ಥಿತಿ ಇದೆ. ನಮ್ಮ ಕೈಯಲ್ಲಾಗಿದ್ದಷ್ಟೇ ನಾವು ಬಗೆಹರಿಸಬಹುದು. ನಮ್ಮ ಗಮನಕ್ಕೆ ಬರುವ ಒಂದೆರಡು ಪ್ರಕರಣಗಳನ್ನಷ್ಟೇ ನಾವು ಬಗೆಹರಿಸಬಹುದು. ಎಲ್ಲವನ್ನೂ ನಾವು ಬಗೆಹರಿಸಲು ಆಗುವುದಿಲ್ಲ. ಎಲ್ಲ ಬಗೆಹರಿಸುವ ಪರಿಸ್ಥಿತಿಯಲ್ಲೂ ನಾವು ಯಾರೂ ಇಲ್ಲ. ಜನರು ಸಮಸ್ಯೆಗಳನ್ನು ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಿ ಎಂದು ಹೇಳಿದರು.

SCROLL FOR NEXT