ರಾಜ್ಯ

ಕಠಿಣ ಕೊರೋನಾ ಕರ್ಫ್ಯೂ: ಬಿಎಂಟಿಸಿಯಿಂದ ಅಗತ್ಯ ಸಾಮಾನ್ಯ ಸಾರಿಗೆ ಸೇವೆ

Nagaraja AB

ಬೆಂಗಳೂರು: ಕೊರೋನಾ ವೈರಸ್ ಸೋಂಕಿನ ಎರಡನೇ ಅಲೆ ಹಾಗೂ ಕೋವಿಡ್  ಪ್ರಕರಣಗಳನ್ನು ತಗ್ಗಿಸಲು  ರಾಜ್ಯ ಸರ್ಕಾರ ಇಂದು  ರಾತ್ರಿ 9 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆಯವರೆಗೆ  ಕಠಿಣ ಕರ್ಫ್ಯೂವನ್ನು ಜಾರಿಗೊಳಿಸಿ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ  ಬಿಎಂಟಿಸಿ  ಸಾರಿಗೆ ಸೇವೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಆದಾಗ್ಯೂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ಮತ್ತಿತರ ಅಗತ್ಯ ಸೇವೆಗಳಲ್ಲಿ  ಕರ್ತವ್ಯ ನಿರ್ವಹಿಸುವ ನೌಕರರ ಅನುಕೂಲಕ್ಕಾಗಿ  ಬಿಎಂಟಿಸಿಯಿಂದ 95 ಮಾರ್ಗಗಳಲ್ಲಿ 150 ಅಗತ್ಯ ಸಾಮಾನ್ಯ ಬಸ್ ಸೇವೆಯನ್ನು ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಲ್ಪಿಸಲಾಗುತ್ತಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 06 ವಾಯು ವಜ್ರ ಬಸ್ ಗಳನ್ನು ವಿಮಾನಯಾನ ಪ್ರಯಾಣಿಕರ ಅನುಕೂಲಕ್ಕಾಗಿ ಒದಗಿಸಲಾಗುತ್ತಿದೆ. ಇವುಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಅನುಮತಿಸಿರುವ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದ ಸಾರ್ವಜನಿಕ ಪ್ರಯಾಣಿಕರು
ಪ್ರಯಾಣಿಸಲು ಅವಕಾಶವಿರುವುದಿಲ್ಲ. 

ಎಲ್ಲಾ ಬಸ್ಸುಗಳಲ್ಲಿ ಒಟ್ಟು ಆಸನಗಳ ಸಾಮರ್ಥ್ಯದ ಶೇ.50 ರಷ್ಟು ಪ್ರಯಾಣಿಕರು ಮಾತ್ರ ಪ್ರಯಾಣಿಸಲು ಅನುಮತಿಸಲಾಗಿದೆ. ಚಾಲನಾ ಸಿಬ್ಬಂದಿ ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸತಕ್ಕದು ಎಂದು ಬಿಎಂಟಿಸಿ ತಿಳಿಸಿದೆ.

SCROLL FOR NEXT