ಮೈಸೂರು: ಕೊರೋನಾ ಸೋಂಕು ಭೀತಿಯಿಂದಾಗಿ ಸರ್ಕಾರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹೇರಿದ್ದು, ಇದರ ಪರಿಣಾಮ ಕರ್ನಾಟಕ-ತಮಿಳುನಾಡು ಹಾಗೂ ಕರ್ನಾಟಕ-ಕೇರಳ ಗಡಿಗಳಲ್ಲಿ ನೂರಾರು ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿತ್ತು.
ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲಾಗಿತ್ತು. ಕೇರಳದಿಂದ ಕರ್ನಾಟಕಕ್ಕೆ ಆಗಮಿಸಬೇಕಿದ್ದ ಜನರು ಆರ್'ಟಿ-ಪಿಸಿಆರ್ ನೆಗೆಟಿವ್ ವರದಿ ಇಟ್ಟುಕೊಂಡು ಬಂದಿದ್ದರೂ ಅವರನ್ನೂ ತಡೆಹಿಡಿಯಲಾಗಿತ್ತು.
ಪರಿಣಾಮ ಗಡಿಯಲ್ಲಿದ್ದ ಅಧಿಕಾರಿಗಳೊಂದಿಗೆ ಸಾಕಷ್ಟು ಜನರು ಮಾತಿನ ಚಕಮಕಿ ನಡೆಸಿದ ಬೆಳವಣಿಗೆಗಳೂ ಕೂಡ ಕಂಡು ಬಂದಿತ್ತು.
ಇದೇ ರೀತಿಯ ಪರಿಸ್ಥಿತಿ ಕರ್ನಾಟಕ-ತಮಿಳುನಾಡು ಗಡಿ ಪ್ರದೇಶದಲ್ಲಿಯೂ ನಿರ್ಮಾಣವಾಗಿತ್ತು. ಈ ಬೆಳವಣಿಗೆಯ ಪರಿಣಾಮ ಮೈಸೂರು-ಬೆಂಗಳೂರು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕೂಡ ಎದುರಾಗಿತ್ತು.