ರಾಜ್ಯ

ರೈಲು ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಕಾರ್ಯಪಡೆ ರಚನೆ

Harshavardhan M

ಬೆಂಗಳೂರು: ರಾಜ್ಯದ ಸರ್ಕಾರಿ ರೈಲ್ವೇ ಪೊಲೀಸ್ (ಜಿ ಆರ್ ಪಿ) ಇಲಾಖೆ ರೈಲು ನಿಲ್ದಾಣಗಳಲ್ಲಿ ಭದ್ರತೆ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಿದೆ. ಈ ಕಾರ್ಯಪಡೆಯಲ್ಲಿ 100 ಪೇದೆಗಳು ಕಾರ್ಯನಿರ್ವಹಿಸಲಿದ್ದಾರೆ.

ಈ ಕಾರ್ಯ ಪಡೆ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ವಿಭಾಗಗಳಲ್ಲಿ ಸಕ್ರಿಯವಾಗಿರಲಿದೆ ಎಂದು ಜಿ ಆರ್ ಪಿ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರದಿಂದ ಈ ಕಾರ್ಯಪಡೆಗೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಜಿ ಆರ್ ಪಿ ಸೂಪರಿಂಟೆಂಡೆಂಟ್ ಸಿರಿ ಗೌರಿ ತಿಳಿಸಿದ್ದಾರೆ. 

ಕಾರ್ಯಪಡೆಯ ನೂರು ಪೇದೆಗಳಲ್ಲಿ 70 ಮಂದಿ ಪುರುಷ ಪೇದೆಗಳಾದರೆ, 30 ಮಂದಿ ಮಹಿಳಾ ಪೇದೆಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ವಿಶೇಷ ಕಾರ್ಯಪಡೆಗೆ ಪ್ರತ್ಯೇಕ ಸಮವಸ್ತ್ರವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು. ಅಲ್ಲದೆ ಅವರಿಗೆ ವಿಶೇಷ ಆತ್ಮರಕ್ಷಣಾ ತರಬೇತಿ ನೀಡಲಾಗುವುದು. ಕಪ್ಪು ಟೀ ಶರ್ಟ್, ಸೇನೆಯ ಸಮವಸ್ತ್ರವನ್ನು ಹೋಲುವ ಹಸಿರು ಬಣ್ಣದ ವಿನ್ಯಾಸವನ್ನೊಳಗೊಂಡ ಪ್ಯಾಂಟ್ ಅನ್ನು ಸಮವಸ್ತ್ರವಾಗಿ ನೀಡಲಾಗುತ್ತಿದೆ. 

ಈ ಹಿಂದೆ ಜಿ ಆರ್ ಪಿ, ಬಿಸಿನೆಸ್ ಕಾರ್ಡ್ ಮಾದರಿಯ ಗುರುತಿನ ಚೀಟಿಗಳನ್ನು ತನ್ನ ಸಿಬ್ಬಂದಿ ವರ್ಗಕ್ಕೆ ನೀಡಿ ಅವರಲ್ಲಿ ಆತ್ಮಸ್ಥೈರ್ಯ ಮತ್ತು ವೃತ್ತಿ ಬಗೆಗೆ ಗೌರವ ಮೂಡಿಸುವ ಕೆಲಸ ಮಾಡಿತ್ತು ಎನ್ನುವುದು ಗಮನಾರ್ಹ.

SCROLL FOR NEXT