ರಾಜ್ಯ

ಬರುವ ಭಾನುವಾರ ಕೆಂಗೇರಿ ಮೆಟ್ರೋ ನಿಲ್ದಾಣ ಉದ್ಘಾಟನೆ: ಕೆಲಸ ಪೂರ್ಣಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕರು

Nagaraja AB

ಬೆಂಗಳೂರು: ಆಗಸ್ಟ್ 29 ಭಾನುವಾರದಂದು ಮೈಸೂರು ರಸ್ತೆ- ಕೆಂಗೇರಿ ನಡುವಣ ಮೈಟ್ರೋ ರೈಲು ಮಾರ್ಗ ಉದ್ಘಾಟನೆಗೊಳ್ಳಲಿದ್ದು, ಈ ಮಾರ್ಗದಲ್ಲಿ ಬರುವ ಆರು ನೂತನ ಮೆಟ್ರೋ ನಿಲ್ದಾಣಗಳಲ್ಲಿ ಅಂತಿಮ ಹಂತದ ಕೆಲಸಗಳು ಭರದಿಂದ  ಸಾಗಿದೆ. ಕಾರ್ಮಿಕರು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಕೆಂಗೇರಿ ಬಸ್ ಟರ್ಮಿನಲ್ ಮೆಟ್ರೋ ನಿಲ್ದಾಣ ಉಳಿದ ಎಲ್ಲಾ ನಿಲ್ದಾಣಗಳಿಗಿಂತ ಹಿಂದೆ ಬಿದಿದ್ದೆ. ಪಾರ್ಕಿಂಗ್ ಸ್ಥಳ ಪೂರ್ಣಗೊಳ್ಳಲು ಇನ್ನೂ ಒಂದೂವರೆ ತಿಂಗಳು ಬೇಕಾಗಲಿದೆ. 

7.5 ಕಿ.ಮೀ ಉದ್ದದ ರೀಚ್ 2 ವಿಸ್ತರಿತಾ ಮಾರ್ಗದಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನ ಭಾರತಿ, ಪಟ್ಟಣಗೆರೆ, ಕೇಂಗೇರಿ ಬಸ್ ಟರ್ಮಿನಲ್ ಮತ್ತು ಕೆಂಗೇರಿಯಲ್ಲಿ ಎತ್ತರಿಸಿದ ನಿಲ್ದಾಣಗಳು ಇವೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸ್ಥಳಕ್ಕೆ ಭೇಟಿ ನೀಡಿದ್ದಾಗ ಈ ನಿಲ್ದಾಣಗಳ ಒಳಗಡೆ ಎಲೆಕ್ಟ್ರಿಕಲ್ ಕೆಲಸ, ಸ್ವಯಂಚಾಲಿತ ಶುಲ್ಕ ಸಂಗ್ರಹ ಗೇಟ್‌ಗಳ ಪರೀಕ್ಷೆ,  ಸ್ಟೇಷನ್ ಕಂಟ್ರೋಲರ್ ರೂಂ ಒಳಗೆ ತಪಾಸಣೆ ಮತ್ತು ಶುಚಿಗೊಳಿಸುವ ಕೆಲಸಗಳು ಭರದಿಂದ ಸಾಗುತ್ತಿರುವುದು ಕಂಡುಬಂದಿತ್ತು. ಭಾನುವಾರಕ್ಕೂ ಮುಂಚಿತವಾಗಿ ಬಾಕಿ ಇರುವ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವುದಾಗಿ ಎಲ್ಲಾ ನಿಲ್ದಾಣಗಳಲ್ಲಿನ ಗುತ್ತಿಗೆದಾರರು ಭರವಸೆ ವ್ಯಕ್ತಪಡಿಸಿದರು.

ಎಲ್ಲಾ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸ್ಥಳಗಳಿವೆ.  ಕೆಂಗೇರಿ ಮತ್ತು ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣದಲ್ಲಿನ ಕೆಲಸಗಳು ಈಗಷ್ಟೇ ಆರಂಭವಾಗಿವೆ. ಈ ಪೈಕಿ ಕೆಂಗೇರಿಯಲ್ಲಿ ಚಿಕ್ಕದಾದ ಪಾರ್ಕಿಂಗ್ ಸಿದ್ಧವಾಗುವ ನಿರೀಕ್ಷೆಯಿದೆ. ಆದರೆ, ಕೆಂಗೇರಿ ಬಸ್ ಟರ್ಮಿನಲ್ ನಿಲ್ದಾಣದಲ್ಲಿನ ನೆಲ ಮಾಳಿಗೆಯಲ್ಲಿ 250 ದ್ವಿಚಕ್ರ ವಾಹನಗಳು ಹಾಗೂ 250 ಕಾರುಗಳಿಗೆ ಅವಕಾಶ ಕಲ್ಪಿಸುವ ಪಾರ್ಕಿಂಗ್ ಕೆಲಸ ನಡೆಯುತ್ತಿದೆ.  ಇದು ಸಿದ್ಧಗೊಳ್ಳಲು ಇನ್ನೂ ಒಂದೂವರೆ ತಿಂಗಳು ಸಮಯಾವಕಾಶ ಬೇಕಾಗಲಿದೆ ಎಂದು
 ಗುತ್ತಿಗೆದಾರ ಎ.ಎಸ್. ಪ್ರಭು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, ಉದ್ಘಾಟನೆಗೂ ಮುನ್ನವೇ ಎಲ್ಲಾ ನಿಲ್ದಾಣಗಳ ಕೆಲಸಗಳು ಸಿದ್ಧಗೊಳ್ಳಲಿವೆ. ಕೆಂಗೇರಿ ಬಸ್ ಟರ್ಮಿನಲ್ ಪಾರ್ಕಿಂಗ್ ಸ್ಥಳನ್ನು ತಪಾಸಣೆ ಮಾಡುವುದಾಗಿ ತಿಳಿಸಿದರು. 

ನೂತನ ಮಾರ್ಗದಲ್ಲಿ 10 ನಿಮಿಷಗಳ ಅಂತರದೊಂದಿಗೆ ರೈಲುಗಳ ಸಂಚಾರವಿರಲಿದೆ. ನೂತನ ಎಲ್ಲಾ ರೈಲು ನಿಲ್ದಾಣಗಳಲ್ಲಿ ಇದೇ ರೀತಿ ಇರಲಿದೆ. ಪೀಕ್ ಅಥವಾ ನಾನ್ ಪೀಕ್ ವೇಳೆಯಲ್ಲಿ 10 ನಿಮಿಷಗಳ ಅಂತರದಲ್ಲಿ ರೈಲುಗಳ ಸಂಚಾರವಿರಲಿದೆ. ಈ ಮಾರ್ಗ ಉದ್ಘಾಟನೆಯೊಂದಿಗೆ 18.1 ಕಿ. ಮೀ. ಉದ್ದದ ಬೈಯಪ್ಪನಹಳ್ಳಿ- ಮೈಸೂರು ರಸ್ತೆಯವರೆಗಿನ ಹಂತ -1 ರ ಪೂರ್ವ-ಪಶ್ಚಿಮ ಕಾರಿಡಾರ್ 25.6 ಕಿಲೋ ಮೀಟರ್ ವರೆಗೂ ವಿಸ್ತರಿಸಲ್ಪಟ್ಟಿದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿ ಬಸ್ ಟರ್ಮಿಲ್ ವರೆಗೂ 56 ರೂ. ದರ ವಿಧಿಸಲಾಗುವುದು ಎಂದು ಪರ್ವೇಜ್ ಮಾಹಿತಿ ನೀಡಿದರು.

SCROLL FOR NEXT