ರಾಜ್ಯ

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪರಾಧ ನಡೆದ ಸ್ಥಳಕ್ಕೆ ಆರೋಪಿಗಳ ಕರೆದೊಯ್ದ ಪೊಲೀಸರು, ಪರಿಶೀಲನೆ

Manjula VN

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗಳನ್ನು ಅತ್ಯಾಚಾರ ನಡೆದ ಸ್ಥಳಕ್ಕೆ ಕರೆತಂದ ಪೊಲೀಸರು, ಸೋಮವಾರ ಸ್ಥಳ ಮಹಜರು ನಡೆಸಿದರು.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದ ಸ್ಥಳಕ್ಕೆ ನಿನ್ನೆಸಂಜೆ 5.30ರ ಸುಮಾರಿಗೆ ಪೊಲೀಸರು ಆರೋಪಿಗಳನ್ನು ಕರೆತಂದು ಮಹಜರು ನಡೆಸಿದರು. 

ಅತ್ಯಾಚಾರ ಪ್ರಕರಣ ಸಂಬಂಧ ತಮಿಳುನಾಡಿನಲ್ಲಿ ಅಡಗಿ ಕುಳಿತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಶನಿವಾರ ಕರೆತಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಶಕ್ಕೆ ಪಡೆದಿದ್ದರು. 

ಇದೇ ವೇಳೆ ಆರೋಪಿಗಳ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ಡಿಎನ್'ಎ ಪರೀಕ್ಷೆಗಾಗಿ ಆರೋಪಿಗಳ ಕೂದಲು, ಚರ್ಮದ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಯಿತು. ಈ ನಡುವೆ ಐವರು ಆರೋಪಿಗಳ ಪೈಕಿ ಓರ್ವ ಅಪ್ರಾಪ್ತನಾಗಿರುವ ಹಿನ್ನೆಲೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆ ಅಥವಾ ಪೊಲೀಸರ ತಪಾಸಣೆ ನಡೆಸಲಾಗಲಿಲ್ಲ. ಆತನ ವಯಸ್ಸು ಕುರಿತು ಪೊಲೀಸರು ದಾಖಲೆಗಳನ್ನು ಸಂಗ್ರಹಿಸಬೇಕಾಗಿದೆ. 

ಪ್ರಕರಣದ ತನಿಖೆ ವೇಳೆ ಅಪರಾಧ ಕೃತ್ಯದಲ್ಲಿ 6 ಮಂದಿಯಲ್ಲ 7 ಮಂದಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 

ಓರ್ವ ಆರೋಪಿ ತಮಿಳುನಾಡಿನ ಸುಸೈಪುರಂ ನಿವಾಸಿಯಾಗಿದ್ದು, ಈತ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈ ಹಿಂದೆ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲೂ ನಜರ್ಬಾದ್ ಪೊಲೀಸರು ಈತನನ್ನು ಬಂಧನಕ್ಕೊಳಪಡಿಸಿದ್ದರೆಂದು ತಿಳಿದುಬಂದಿದೆ. 

ಇದಲ್ಲದೆ, ಅಂತರ್ ರಾಜ್ಯ ಸ್ಮಗ್ಲಿಂಗ್ ಪ್ರಕರಣದಲ್ಲೂ ಈತ ಹಾಗೂ ಈತನ ಜೊತೆಗಿದ್ದ ಮೂವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಆದರೆ, ಜಾಮೀನಿನ ಮೇರೆಗೆ ಈತ ಹೊರ ಬಂದಿದ್ದ. ಇದಾದ ಬಳಿಕ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT