ರಾಜ್ಯ

ವಿಧಾನ ಸೌಧ ನಿರ್ಮಾತೃ, ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ 41ನೇ ಪುಣ್ಯತಿಥಿ: ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದೇನು?

Sumana Upadhyaya

ಬೆಂಗಳೂರು: ರಾಜ್ಯಕ್ಕೆ ಬರುವ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿಲ್ಲಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತೀರ್ಮಾನ ತೆಗೆದುಕೊಳ್ಳುತ್ತಾರೆ, ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಓಮಿಕ್ರಾನ್ ರೂಪಾಂತರಿ ಕೊರೋನಾ ವೈರಸ್ ನಮ್ಮ ರಾಜ್ಯ ಸೇರಿದಂತೆ ದೇಶದಲ್ಲಿ ಪತ್ತೆಯಾಗಿಲ್ಲ, ಆದರೂ ನಾವು ಪ್ರಜೆಗಳು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ರೂವಾರಿ, ವಿಧಾನಸೌಧದ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ 41 ನೇ ಪುಣ್ಯ ತಿಥಿಯಂದು ಸರ್ಕಾರದ ಪರವಾಗಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರ ಜೊತೆ ಮಾತನಾಡಿದರು.

ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಚಿಂತನೆ ಮಾಡಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸದ್ಯಕ್ಕೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ, ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.

ಕೇರಳ ಮತ್ತು ಮಹಾರಾಷ್ಟ್ರ ಗಡಿಭಾಗದ ಜಿಲ್ಲೆಗಳು ಸೇರಿದಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಇನ್ನು ನಿಗದಿಯಂತೆ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತದೆ. ಅಧಿವೇಶನದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಕೆಂಗಲ್ ಹನುಮಂತಯ್ಯ ಸ್ಮರಣೆ: ದೇಶಕ್ಕೆ ಸ್ವಾತಂತ್ರ್ಯ ತರುವ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ, ಕರ್ನಾಟಕದ ಮುಖ್ಯಮಂತ್ರಿಯಾಗಿ ತನ್ನದೇ ಛಾಪು ಮೂಡಿಸಿದ್ದ, ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಕರ್ನಾಟಕಕ್ಕೆ ಹೆಚ್ಚು ಒತ್ತು ನೀಡಿದ್ದ, ರಾಮಾಯಣ ಪುಸ್ತಕವನ್ನು ಮನೆಮನೆಗೆ ತಲುಪಿಸಬೇಕೆಂದು ಅಭಿಯಾನ ಆರಂಭಿಸಿದ್ದ ನಮ್ಮ ಮೆಚ್ಚಿನ ನಾಯಕ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿ ಇಂದು ಎಂದರು.

ಎಲ್ಲಿಯವರೆಗೆ ಈ ವಿಧಾನಸೌಧ ಇರುತ್ತದೋ ಅಲ್ಲಿಯವರೆಗೂ ಕೆಂಗಲ್ ಹನುಮಂತಯ್ಯ ಅವರ ನೆನಪು ಹಾಗೂ ನಂತರವೂ ಶಾಶ್ವತವಾಗಿ ಇರುತ್ತದೆ. ಇಡೀ ದೇಶಕ್ಕೆ ಮಾದರಿಯಾದ ವಿಧಾನಸೌಧ ಕಟ್ಟಡವನ್ನು ನಿರ್ಮಿಸಿದವರು ಕೆಂಗಲ್ ಅವರು, ಇಲ್ಲಿನ ಪ್ರತಿಯೊಂದು ಕಂಬದಲ್ಲಿಯೂ ಕೆಂಗಲ್ ಅವರ ನೈಪುಣ್ಯತೆಯಿದೆ. ದೇಶ ವಿದೇಶಗಳಿಂದ ನಮ್ಮ ವಿಧಾನಸೌಧವನ್ನು ನೋಡಲು ಬರುವುದೇ ಇದಕ್ಕೆ ಸಾಕ್ಷಿ ಎಂದು ಆರ್ ಅಶೋಕ್ ಹೇಳಿದರು.

SCROLL FOR NEXT