ರಾಜ್ಯ

ಬೆಂಗಳೂರು: ಇಂದಿರಾನಗರದ 80 ಅಡಿ ರಸ್ತೆಯಲ್ಲಿ ಸರಣಿ ಅಪಘಾತ; ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

Vishwanath S

ಬೆಂಗಳೂರು: ಬೆಂಝ್ ಕಾರಿನ ಚಾಲಕನ ಅಜಾಗರೂಕ ಚಾಲನೆ ಸರಣಿ ಅಪಘಾತಕ್ಕೆ ಕಾರಣವಾಗಿದೆ. ಅಪಘಾತದಲ್ಲಿ ಮೂರು ವಾಹನಗಳು ಹಾನಿಗೊಳಗಾದರೆ ರೆಸ್ಟೋರೆಂಟ್ ಉದ್ಯೋಗಿಯ ಜೀವವನ್ನು ಬಲಿ ತೆಗೆದುಕೊಂಡಿದೆ. ಮಂಗಳವಾರ ಮಧ್ಯಾಹ್ನ ಇಂದಿರಾನಗರ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಚಾಲಕನ ಸ್ಥಿತಿ ಸಹ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಮೃತನನ್ನು ಅಸ್ಸಾಂ ಮೂಲದ 36 ವರ್ಷದ ಹರಿ ಮಹಂತ್ ಎಂದು ಗುರುತಿಸಲಾಗಿದ್ದು, ರೆಸ್ಟೋರೆಂಟ್‌ನ ವಾಲೆಟ್ ಪಾರ್ಕಿಂಗ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ದೂಪಸಂದ್ರದಲ್ಲಿ ವಾಸವಿದ್ದ ಅವರು ಹತ್ತು ವರ್ಷಗಳಿಂದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. 

ಬೆಂಝ್ ಕಾರಿನ ಚಾಲಕ 40 ವರ್ಷದ ಸುವಿಧ್ ಉದ್ಯಮಿಯಾಗಿದ್ದು ಡಿಫೆನ್ಸ್ ಕಾಲೋನಿ ನಿವಾಸಿ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಮಧ್ಯಾಹ್ನ 3.15ರ ಸುಮಾರಿಗೆ ಈ ಘಟನೆ ನಡೆದಿದ್ದು, ಸುವಿದ್ ಹೈ ಎಂಡ್ ಕಾರನ್ನು ಅತಿವೇಗದಿಂದ ಚಲಾಯಿಸಿಕೊಂಡು ಬಂದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ನಂತರ ಆಟೋ ರಿಕ್ಷಾ ಮತ್ತು ಸರಕು ಸಾಗಣೆ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪಾರ್ಕಿಂಗ್‌ನಿಂದ ಕಾರನ್ನು ಹೊರತೆಗೆಯುತ್ತಿದ್ದ ಮಹಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ವಾಹನಗಳ ಚಾಲಕರಿಗೆ ಗಾಯಗಳಾಗಿವೆ. ಅಪಘಾತ ಮಾಹಿತಿ ಸಿಕ್ಕ ಕೂಡಲೇ ಹಲಸೂರು ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಹಾನಿಗೊಳಗಾದ ವಾಹನಗಳನ್ನು ರಸ್ತೆಯಿಂದ ತೆಗೆದು ಸಂಚಾರ ಸುಗಮಗೊಳಿಸಿದರು.

ಪ್ರತ್ಯಕ್ಷದರ್ಶಿ ಮಹೀಂದ್ರಾ ಎಂಬುವರು ನಾನು ನನ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಹೈ ಎಂಡ್ ಕಾರು ವಾಹನಗಳಿಗೆ ಡಿಕ್ಕಿ ಹೊಡೆಯಿತು. ನಾನು ಕಾರಿನ ಚಾಲಕರ ಸಹಾಯಕ್ಕೆ ಹೋದೆ.  ಪೊಲೀಸರು ಸ್ಥಳಕ್ಕೆ ತಲುಪುವ ಮೊದಲು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದರು.

SCROLL FOR NEXT